ಮೈಸೂರು: ಕೋವಿಡ್ ನಿಯಮ ಮಾರ್ಗಸೂಚಿಗಳನ್ನು ತೆರವುಗೊಳಿಸಿದ ಬಳಿಕ ದೇವಸ್ಥಾನಗಳಿಗೆ ಭೇಟೀ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರಿಯಾಗಿ ದೇವರ ದರ್ಶನ, ಹುಣ್ಣಿಮೆ ಪೂಜೆ ಸೇರಿದಂತೆ ಹಲವು ಕೈಂಕರ್ಯಗಳನ್ನು ಮಾಡಲಾಗದಿದ್ದ ನಂಜುಂಡೇಶ್ವರನ ಭಕ್ತರು ಇದೀಗ ನಂಜನಗೂಡಿಗೆ ಆಗಮಿಸುತ್ತಿರುವುದು ಕಂಡು ಬರುತ್ತಿದೆ.
ಹುಣ್ಣಿಮೆ ಪ್ರಯುಕ್ತ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆಯನ್ನು ತೀರಿಸಿಕೊಂಡರು.
ಸ್ಥಳೀಯರು ಮಾತ್ರವಲ್ಲದೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದು ದೇಗುಲದ ಆವರಣದಲ್ಲಿ ವಾಸ್ತವ್ಯ ಹೂಡಿದ್ದ ಭಕ್ತರು ದೇಗುಲದ ಬಳಿಯ ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರಲ್ಲದೆ, ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಿ ಹರಕೆ ತೀರಿಸಿದರು.
ಕೆಲವು ಭಕ್ತರು ಮುಡಿ ಸೇವೆ. ಉರುಳುಸೇವೆ. ತುಲಾಭಾರ. ಪಂಚ ಮುಡಿ ಸೇವೆ ಮತ್ತು ಬೆಳ್ಳಿ ಹರಕೆ ಸೇವೆ ಧೂಪದ ಸೇವೆ ಸೇರಿದಂತೆ ಹಲವಾರು ಸೇವೆಗಳನ್ನು ಭಕ್ತಿಯಿಂದ ಮಾಡಿ ತಮ್ಮ ತಮ್ಮಕುಟುಂಬ ಸಮೇತ ಹರಕೆಗಳನ್ನು ತೀರಿಸಿದರು. ಇನ್ನು ಕೆಲವು ಭಕ್ತರು ದೇವಸ್ಥಾನದ ಮುಂಭಾಗದಲ್ಲಿರುವ ಬಸವನಿಗೆ ಪೂಜೆ ಸಲ್ಲಿಸಿ ನಮಿಸಿದರು.
ದೇಗುಲದಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ದೇಗುಲದ ಆಡಳಿತ ಮಂಡಳಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.ಜತೆಗೆ ದೇವಸ್ಥಾನದ ಹೊರಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜತೆಗೆ ಭಕ್ತರಿಗೆ ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.