ಚಾಮರಾಜನಗರ: ಮಲೆ ಮಹದೇಶ್ವರಬೆಟ್ಟದ ದೇಗುಲದಲ್ಲಿ ಅರ್ಚಕ ವೃತ್ತಿ ಮಾಡುತ್ತಿರುವವರ ವೇತನ ಹೆಚ್ಚಿಸುವುದರ ಜೊತೆಗೆ ಹಾಲರವೆ ಹಾಗೂ ಕುಂಭಾಭಿಷೇಕದ ಸೇವೆಯ ಸಂಭಾವನೆಯನ್ನು ಹೆಚ್ಚಳ ಮಾಡಬೇಕು ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಬೇಡಗಂಪಣ ಅರ್ಚಕರ ಸಂಘದ ಗೌರವಾಧ್ಯಕ್ಷ ಪುಟ್ಟಣ ಮಾಸ್ಟರ್ ಆಗ್ರಹಿಸಿದ್ದಾರೆ.
ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ದೇವಸ್ಥಾನದಲ್ಲಿ ಬೇಡಗಂಪಣ ಅರ್ಚಕರು ಹಲವು ದಶಕಗಳಿಂದ ವಂಶ ಪಾರಂಪರ್ಯವಾಗಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಪ್ರಾಧಿಕಾರದ ಆಡಳಿತ ಎಂದಿನಂತೆ ಅರ್ಚಕರುಗಳಿಗೆ ಪೂಜಾ ಕೈಂಕರ್ಯಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ದೇವಸ್ಥಾನದ ಒಳಾಂಗಣದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರ ವಂಶ ಪಾರಂಪರಿಕ ಹುದ್ದೆಗಳನ್ನು ಮುಂದುವರಿಸಬೇಕು. ಅಲ್ಲದೇ ತಳಿಗೆ ಮನೆಯಲ್ಲಿ ಸಮರ್ಪಕ ಮೂಲ ಸೌಕರ್ಯವಿಲ್ಲ. ಹಾಗಾಗಿ ತಳಿಗೆ ಮನೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಅರ್ಚಕರು ದೇವಸ್ಥಾನಕ್ಕೆ ಹೋಗಿ ಬರಬೇಕಾದರೆ ಭಕ್ತರು ತೆರಳುವ ಮಾರ್ಗದಲ್ಲಿಯೇ ತೆರಳಬೇಕಿದೆ. ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಅರ್ಚಕರು ತೆರಳಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಳೆದ ಹಲವು ವರ್ಷಗಳಿಂದ ಮಾದಪ್ಪನ ಸನ್ನಿಧಿಯಲ್ಲಿ ಅರ್ಚಕರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ವೇತನವನ್ನು ಹೆಚ್ಚಿಸಿಲ್ಲ. ಹಾಗಾಗಿ ವೇತನವನ್ನು ಪರಿಷ್ಕರಿಸಬೇಕು. ಜೊತೆಗೆ ಹಾಲರವಿ ಹಾಗೂ ಕುಂಭಾಭಿಷೇಕದ ಸೇವೆಯ ಸಂಭಾವನೆಯನ್ನು ಹೆಚ್ಚಿಸಬೇಕು. ಇನ್ನು ವೇದಾಗಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ಆಡಳಿತ ವತಿಯಿಂದಲೇ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಮಹದೇಶ್ವರರ ಉಪ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಬಗ್ಗೆ ಪ್ರಾಧಿಕಾರದ ಆಡಳಿತ ಅಗತ್ಯ ಕ್ರಮವಹಿಸುವುದರ ಮೂಲಕ ಅರ್ಚಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆ ಮಹದೇಶ್ವರಸ್ವಾಮಿ ಬೇಡಗಂಪಣ ಅರ್ಚಕರ ಸಂಘದ ಅಧ್ಯಕ್ಷ ಹೆಚ್.ಎಂ ಮಾದಯ್ಯ, ಗ್ರಾಪಂ ಅಧ್ಯಕ್ಷ ಕುಮಾರ್, ಬೇಡಗಂಪಣರು, ಅರ್ಚಕರು ಹಾಗೂ ಇನ್ನಿತರರು ಇದ್ದರು.