ಮೈಸೂರು: ಕೊರೊನಾದ ಆತಂಕದ ನಡುವೆಯೂ ಹುಣ್ಣಿಮೆಯ ವಿಶೇಷ ಪೂಜೆಗೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತು.
ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಮಾರ್ಗಶಿರ ಹುಣ್ಣಿಮೆಯ ಪೂಜೆಯನ್ನು ನೆರವೇರಿಸಿದರು. ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಚಳಿಯನ್ನು ಲೆಕ್ಕಿಸದೆ ಕಪಿಲಾ ನದಿಯಲ್ಲಿ ಮಿಂದು ಸರದಿ ಸಾಲಿನಲ್ಲಿ ನಿಂತು ಶ್ರೀಕಂಠೇಶ್ವರ ದರ್ಶನ ಪಡೆದರು.
ಭಾನುವಾರ ರಜೆ ಇರುವ ಕಾರಣ ಮಾಮೂಲಿಗಿಂತ ತುಸು ಹೆಚ್ಚಾಗಿಯೇ ಭಕ್ತರು ಆಗಮಿಸಿದ್ದರು. ಶನಿವಾರ ರಾತ್ರಿಯೇ ಆಗಮಿಸಿ ದೇಗುಲದ ಬಳಿ ವಾಸ್ತವ್ಯ ಹೂಡಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳನ್ನು ಮಾಡಿದರು. ಕಳೆದ ಎರಡು ವರ್ಷದಿಂದ ಕೊರೊನಾ ನೆಪದಿಂದ ಸಣ್ಣಪುಟ್ಟ ಅಂಗಡಿ ಮುಂಗಟ್ಟು ಗಳಿಗೆ ಹಾಗೂ ಹೋಟೆಲ್ ಗಳಿಗೆ, ಗಾಡಿ ವ್ಯಾಪಾರಸ್ಥರಿಗೆ ವ್ಯಾಪಾರ ಇಲ್ಲದಂತೆ ಆಗಿತ್ತು.
ಇದೀಗ ಕೋವಿಡ್ ನಿಯಮವನ್ನು ಸಡಿಲಗೊಳಿಸಿದ್ದರಿಂದ ಭಕ್ತರು ಆಗಮಿಸಿದ್ದು, ಒಂದಷ್ಟು ವ್ಯಾಪಾರ ವಹಿವಾಟು ನಡೆದಿದೆ. ಆದರೆ ಕೊರೊನಾದ ಭಯ ಮರೆತು ಜನ ಪಾಲ್ಗೊಂಡಿದ್ದು ಭೀತಿ ಮೂಡಿಸಿದೆ. ಇನ್ನು ವಾಹನ ನಿಲುಗಡೆಯ ಪ್ರತಿಯೊಂದು ಕೌಂಟರ್ ಗಳು ಭರ್ತಿಯಾಗಿತ್ತು.
ನೋಡಲು ದೊಡ್ಡ ಜಾತ್ರೆಯಂತೆ ಜನಸಂಖ್ಯೆ ಕಂಡು ಬಂದಿತ್ತು. ದಾಸೋಹ ಭವನದಲ್ಲಿ ಬೆಳಗ್ಗೆ ಹನ್ನೊಂದು ಗಂಟೆಯಿಂದಲೇ ಪ್ರಸಾದ ವಿನಿಯೋಗ ಪ್ರಾರಂಭವಾಗಿತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಅಧಿಕಾರಿಗಳು ಪುರೋಹಿತರು ಮತ್ತು ನೌಕರರು ಸಹಕರಿಸಿದರು.