ಮೈಸೂರು, ಮೇ.9: ಮಸೀದಿ ಮೇಲಿನ ಮೈಕ್ ತೆಗೆಸಲು ಸರಕಾರಕ್ಕೆ ಗಡವು ನೀಡಿದ್ದೆವು. ಸರಕಾರ ಈ ಬಗ್ಗೆ ಕ್ರಮ ಜರುಗಿಸಲಿಲ್ಲ ಹೀಗಾಗಿ ದೇವಾಲಯಗಳಲ್ಲಿ ಸುಪ್ರಭಾತಕ್ಕೆ ಚಾಲನೆ ನೀಡಿದ್ದೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಶಿವರಾಮ ಪೇಟೆಯಲ್ಲಿರುವ ತ್ರಿಪುರ ಭೈರವಿ ಮಠದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಓಂಕಾರ ದೊಂದಿಗೆ ಸುಪ್ರಸಿದ್ಧ ಹನುಮಾನ್ ಚಾಲೀಸ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಮುಸ್ಲಿಂರ ಹಠದಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ತಾಲಿಬಾನ್ ಅಲ್ಲ, ಪಾಕಿಸ್ತಾನ್ ಅಲ್ಲ. ಈ ರೀತಿ ಹಠ ಸರಿಯಲ್ಲ. ಸಂಘರ್ಷಕ್ಕೆ ನೀವೆ ಅವಕಾಶ ಮಾಡಿ ಕೊಡುತ್ತಿದ್ದೀರಿ ಎಂದರು. ಈ ಆಂದೋಲನ ಹತ್ತಿಕ್ಕುವ ಕೆಲಸವನ್ನು ಸುಪ್ರಭಾತ ಹಾಕಲು ಹೋದವರು ಬಂಧನ ಮಾಡುವ ಮೂಲಕ ಸರಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮೈಕ್ ಹಾಕುವ ದೇವಸ್ಥಾನಗಳಿಗೆ ನೋಟಿಸ್ ನೀಡುತ್ತೀರಿ. ಮಸೀದಿಗೆ ಯಾಕೆ ನೋಟೀಸ್ ಕೊಡಲ್ಲ. ಇಂತಹ ಬಿಜೆಪಿ ಸರಕಾರಕ್ಕೆ ಕ್ಕಾರ ಇರಲಿ ಎಂದ ಅವರು, ಇದು ನ್ಯಾಯಾನಾ? ದೇವಸ್ಥಾನಗಳಲ್ಲಿ ಸುಪ್ರಭಾತಕ್ಕೆ ವಿರೋಧ ಮಾಡುತ್ತೀರಾ. ಅದೇ ಮಸೀದಿಗಳಲ್ಲಿ ಆಜಾನ್ ಕೂಗಲು ಅವಕಾಶ ಕೊಡುತ್ತೀರಾ..ಆಜಾನ್ಗೆ ಅವಕಾಶ ಕೊಟ್ಟು ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡುತ್ತಿದ್ದೀರಾ. ಎಂದು ಪ್ರಶ್ನಿಸಿದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಗೃಹ ಮಂತ್ರಿಯನ್ನು ಹೊಣೆಗಾರರನ್ನಾಗಿ ಹೈಕೋರ್ಟ್ನಲ್ಲಿ ಕಂಟೆಂಪ್ಟ್ ಆಫ್ ಕೋರ್ಟ್ ಅರ್ಜಿ ದಾಖಲಿಸುತ್ತೇವೆ. ನಾಳೆಯಿಂದ ನಮ್ಮ ಹೋರಾಟ ಮತ್ತಷ್ಟು ಉಗ್ರವಾಗಲಿದೆ ಎಂದು ಮುತಾಲಿಕ್ ತಿಳಿಸಿದರು.
ಧ್ವನಿವರ್ಧಕಗಳ ಮೂಲಕ ಭಕ್ತಿಗೀತೆಗಳ ಗಾಯನ ಹಾಗೂ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಹಾಗೂ ಹನುಮ ಭಜನೆ ನಡೆಸಿಕೊಟ್ಟರು.
ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ ಮುಂಜಾನೆ ಹನುಮಾನ್ ಚಾಲೀಸ ಪಠಣ ನಡೆದವು. ಮೈಸೂರಿನಲ್ಲಿ ಇಂದು ಮುಂಜಾನೆ ಸುಪ್ರಭಾತ ಮತ್ತು ಹನುಮಾನ್ ಚಾಲೀಸಕ್ಕೆ ಚಾಲನೆ ನೀಡಿದರು.