ಮೈಸೂರು: ರಾಷ್ಟ್ರೀಯ ರಸ್ತೆ ಬದಿ ವ್ಯಾಪಾರಿಗಳ ದಿನಾಚರಣೆ ಅಂಗವಾಗಿ ನಂಜುಮಳಿಗೆಯಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ತರಕಾರಿ ವ್ಯಾಪಾರಿಗಳಿಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತ ನಿಧಿ ಕೇಂದ್ರ ವತಿಯಿಂದ ಹೊದಿಕೆ ಹಾಗೂ ಸ್ವೆಟರ್ ಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ.ಗಂಗಾಧರ್ ಕೊರೋನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತೆಗಳನ್ನು ಎಲ್ಲರೂ ಅನುಸರಿಸಬೇಕು. ಕೊರೊನಾದಿಂದಾಗಿ ಎಲ್ಲರ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಸರ್ಕಾರ ಸೌಲಭ್ಯಗಳನ್ನು ಪಡೆದು ಎಲ್ಲರೂ ಚೇತರಿಸಿಕೊಳ್ಳಿ.
ಧೂಳು, ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ದುಡಿಯುವ ಕಾರ್ಮಿಕರಾಗಿದ್ದು, ಮಕ್ಕಳ ವಿದ್ಯಾಭ್ಯಾಸ ಹಾಗೂ ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಿ ಎಂದರು.
ರಸ್ತೆ ಬದಿ ವ್ಯಾಪಾರಿಗಳು ಸುರಕ್ಷತೆ ಹಾಗೂ ಆರೋಗ್ಯದ ಕಡೆ ನಿಗಾ ವಹಿಸಬೇಕಿದೆ. ಪಾದಾಚಾರಿಗಳಿಗೆ ವಾಹನ ಸವಾರರಿಗೆ ಅಡಚಣೆಯಾಗದಂತೆ ವ್ಯಾಪಾರ ವಹಿವಾಟು ಮಾಡಬೇಕು, ರಸ್ತೆ ನಿಯಮಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಎಲ್ಲರಿಗೂ ಒಳಿತಾಗಲಿದೆ. ಬೀದಿಬದಿ ವ್ಯಾಪಾರಸ್ಥರು ಸ್ವಾವಲಂಬಿಗಳಾಗಿದ್ದಾರೆ.
ಸರ್ಕಾರದ ಸೌಕರ್ಯಗಳನ್ನು ಹೊಂದಿ ಮಕ್ಕಳ ಶೈಕ್ಷಣಾಕಾಭಿವೃದ್ಧಿ ಕಡೆ ಒತ್ತು ಕೊಡಬೇಕೆಂದರು. ಹಾಗೆಯೇ ಸರ್ಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ರಸ್ತೆ ಬದಿ ವ್ಯಾಪಾರಿಗಳು ಸಂಘಟನಾತ್ಮಕವಾಗಿ ಮುಂದುವರಿಯಬೇಕು ಎಂದು ಹೇಳಿದರು.
ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನವೀನ್ ಕೆಂಪಿ, ಸುಚೀಂದ್ರ ಇನ್ನಿತರರು ಹಾಜರಿದ್ದರು.