ಮೈಸೂರು (ಮಾ.5) : ಉಕ್ರೇನ್ನಲ್ಲಿ ಯುದ್ಧ ಪರಿಸ್ಥಿತಿ ತೀವ್ರಗೊಂಡಿದ್ದು, ಭಾರತೀಯರನ್ನು ಕರೆತರಲು ಕೇಂದ್ರ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಜನರನ್ನ ಕರೆಕೊಂಡು ಬರ್ತಿದೆ. 2 ದಿನಗಳ ಹಿಂದೆ ಉಕ್ರೇನ್ನಿಂದ ಸೇಫ್ ಆಗಿ ಭಾರತಕ್ಕೆ ಬಂದಿಳಿದ ಎಂಬಿಬಿಎಸ್ ವಿದ್ಯಾರ್ಥಿಗಳು, ಉಕ್ರೇನ್ಗೆ ಕಾಲಿಡಲು ಭಾರತ ಸರ್ಕಾರಕ್ಕೆ ಗಡ್ಸ್ ಇಲ್ಲ ಎಂದಿದ್ದರು.
ಈ ವಿಚಾರಕ್ಕೆ ಇಂದು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್ನಿಂದ ರಕ್ಷಿಸುತ್ತಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಉಕ್ರೇನಲ್ಲಿರೋ ಭಾರತೀಯರ ರಕ್ಷಣಾಕಾರ್ಯ ಭರದಿಂದ ಸಾಗಿದೆ. ಎಲ್ಲರನ್ನು ಸರ್ಕಾರ ಸುರಕ್ಷಿತವಾಗಿ ಕರೆದುಕೊಂಡು ಬರ್ತಿದೆ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮೈಸೂರಿನಲ್ಲಿ ಮಾತನಾಡಿದ ಅವರು, ಉಕ್ರೇನ್ನಲ್ಲಿ ರಕ್ಷಣಾ ಕಾರ್ಯ ಬಹಳ ಚುರುಕಾಗಿ ನಡೆಯುತ್ತಿದೆ. ಉಕ್ರೇನ್ ಗಡಿ ದಾಟಿದ ಕೂಡಲೇ ಅಲ್ಲಿಂದ ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದೇವೆ. ಯುದ್ದಕ್ಕೂ ಮುನ್ನ ಅಲ್ಲಿರೋ ಭಾರತೀಯರಿಗೆ ಮೂರು ಬಾರಿ ಸಲಹೆ ಕೊಟ್ಟಿದ್ದೆವು. ಉಕ್ರೇನ್ನಿಂದ ಹೊರಟ್ಟು ಬನ್ನಿ ಅಂತ ಮೊದಲೇ ಹೇಳಲಾಗಿತ್ತು. ಆದ್ರೆ ಯಾರು ಕೇಳಲಿಲ್ಲ. ಈಗ ತೆರಿಗೆ ಹಣದಿಂದ ಅವರನ್ನು ವಿಮಾನದಲ್ಲಿ ಕರೆದುಕೊಂಡು ಬರಲಾಗ್ತಿದೆ. ಉಕ್ರೇನ್ನಿಂದ ಭಾರತ ಸರ್ಕಾರ ಅವರನ್ನ ರಕ್ಷಿಸಿ ಕರೆದುಕೊಂಡು ಬರ್ತಿದೆ ಆದ್ರೆ ಕೆಲವರು ಕೃತಜ್ಞತೆ ಇಲ್ಲದೆ ಮಾತಾಡಿದ್ದಾರೆ. ಅವರ ಮಟ್ಟಕ್ಕೆ ಇಳಿದು ನಾನು ಅವರನ್ನ ಟೀಕೆ ಮಾಡಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಾರ್ಚ್ 2 ರಂದು ಉಕ್ರೇನ್ನಿಂದ ಭಾರತಕ್ಕೆ ಬಂದಿಳಿದ ನಾಲ್ವರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರಕ್ಕೆ ವಿರುದ್ಧ ಕಿಡಿಕಾರಿದ್ರು. ನಾವು ಉಕ್ರೇನ್ನಲ್ಲಿದ್ದ ವೇಳೆ ನಮಗೆ ಸಹಾಯ ಮಾಡಿದ್ದು ಹಂಗೇರಿ ಸರ್ಕಾರ ಹಾಗೂ ಚಾರಿಟಿ ಟ್ರಸ್ಟ್ಗಳಿಗು ನಮ್ಮ ಸ್ವತಃ ಹಣದಿಂದ ನಾವು ಟ್ಯಾಕ್ಸಿ ಮಾಡಿಕೊಂಡು ಉಕ್ರೇನ್ನಲ್ಲಿ ಸುರಕ್ಷಿತ ಸ್ಥಳಕ್ಕೆ ತಲುಪಿದ್ದೇವೆ. ನಮ್ಮ ಊಟ, ತಿಂಡಿ ತಂದುಕೊಟ್ಟಿದ್ದು ಚಾರಿಟಿ ಟ್ರಸ್ಟ್ ಗಳು ಭಾರತ ಸರ್ಕಾರ ಅಲ್ಲ, ಉಕ್ರೇನ್ಗೆ ಕಾಲಿಡಲು ಭಾರತ ಸರ್ಕಾರಕ್ಕೆ ಗಡ್ಸ್ ಇಲ್ಲ ಅಂತ ಕೆಲ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ರು.
ಕಾಂಗ್ರೆಸ್ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ. ನೆಹರು ಕಾಂಗ್ರೆಸ್ನವರು ನಮಗೆ ವಿದೇಶಾಂಗ ನೀತಿಯ ಬಗ್ಗೆ ಪಾಠ ಹೇಳುತ್ತಿದ್ದಾರೆ. ಅವರ ಆಡಳಿತದ ವಿದೇಶಾಂಗ ನೀತಿ ಹೇಗಿತ್ತು. ಅದರಿಂದ ದೇಶಕ್ಕೆ ಆದ ನಷ್ಟ ಎಷ್ಟು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಚೀನಾ ಟಿಬೆಟ್ ಕಬಳಿಸಿದ್ದಾಗ ಸುಮ್ಮೆನೆ ಇದ್ದ ಕಾಂಗ್ರೆಸ್ ಈಗ ನಮಗೆ ವಿದೇಶಾಂಗ ನೀತಿಯ ಪಾಠ ಮಾಡುತ್ತಿದೆ ಅಂತಾ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾದ ವಿರುದ್ಧ ನಾವು ಹೋಗಲು ಕಷ್ಟವಿದೆ. ತನ್ನ ಭದ್ರತೆ, ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ಮೇಲೆ ಭಾರತ ಅತಿ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆ ಸೃಷ್ಟಿಸಿದ್ದೇ ಕಾಂಗ್ರೆಸ್. ರಷ್ಯಾವನ್ನು ಎದುರು ಹಾಕಿಕೊಂಡರೆ ಮುಂದೆ ನಮಗೆ ಯುದ್ಧದಂತಹ ಸಂದರ್ಭ ಸೃಷ್ಟಿಯಾದರೆ ನಮ್ಮ ನೆರವಿಗೆ ರಷ್ಯಾ ಬರುತ್ತಾ? ಹೀಗಾಗಿ ಪ್ರಧಾನಿಗಳು ಈಗ ತಟಸ್ಥ ನಿಲುವಿಗೆ ಬಂದಿದ್ದಾರೆ. ಅಲ್ಲಿನ ಎಲ್ಲಾ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ವ್ಯವಸ್ಥಿತವಾಗಿ ಸಾಗಿದೆ ಎಂದರು.
ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನೀಟ್ ಬ್ಯಾನ್ ಕ್ಯಾಂಪೇನ್ ನಡೆಯುತ್ತಿರುವ ವಿಚಾರ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನೀಟ್ ತರಲಾಗಿದೆ. 138 ಕೋಟಿ ಜನಸಂಖ್ಯೆ ಇರುವ ದೇಶಕ್ಕೆ, ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್ ಬರಬೇಕು. ಆಗ ಸೀಟು ಹೆಚ್ಚಾಗುತ್ತೆ, ಎಲ್ಲರಿಗೂ ಅವಕಾಶ ಸಿಗುತ್ತೆ ಎಂದ್ರು