ಮೈಸೂರು: ಕಳೆದ ಹಲವು ವರ್ಷಗಳಿಂದ ಸ್ಥಗಿತವಾಗಿದ್ದ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯಲ್ಲಿ 2022ರ ಜೂನ್ ತಿಂಗಳಿನಿಂದ ಕಬ್ಬು ಅರೆಯುವ ಕಾರ್ಯ ಆರಂಭವಾಗಲಿದೆ.
ಶ್ರೀರಾಮ ಸಕ್ಕರೆ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನರಾರಂಭ ಸಂಬಂಧ ಬೆಳಗಾವಿಯ ಸುವರ್ಣಸೌಧದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಪ್ರಾರಂಭ ಮಾಡಲು ಟೆಂಡರ್ದಾರರಿಗೆ ನೋಂದಣಿ ಶುಲ್ಕ 8 ಕೋಟಿ ರೂ.ಮನ್ನಾ ಮಾಡಲು ಒಂದು ವಾರದಲ್ಲಿ ಕ್ಯಾಬಿನೆಟ್ಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.
ಕಾರ್ಖಾನೆಗೆ ಸೇರಿದ 125 ಎಕರೆ ಪೈಕಿ 85 ಎಕರೆ ಭೂಮಿ ಸರ್ಕಾರಕ್ಕೆ ಅಡಮಾನ ಆಗಿರುವ ಜಮೀನನ್ನು ಕೈಬಿಡುವ ಬಗ್ಗೆ ಮತ್ತು ಟೆಂಡರ್ದಾರರಿಗೆ 125 ಎಕರೆ ಜಾಗದ ಮೇಲೆ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಟೆಂಡರ್ ಷರತ್ತಿಗೆ ವಿನಾಯಿತಿ ನೀಡಲು ಕಾರ್ಖಾನೆಯ ವಾರ್ಷಿಕ ಮಹಾಸಭೆಯ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲು ಹಾಗೂ ಸರ್ಕಾರದಿಂದ ಮಹಾಸಭೆಯ ನಿರ್ಣಯದಂತೆ ಸಚಿವ ಸಂಪುಟಕ್ಕೆ ಮಂಡಿಸಲು ನಿರ್ಣಯಿಸಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಸಾ.ರಾ.ಮಹೇಶ್, ಕೆ.ಮಹದೇವು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಕ್ಕರೆ ಆಯುಕ್ತ ಶಿವಾನಂದ ಕಲ್ಕೆರಿ, ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಹಾಜರಿದ್ದರು.