ಮೈಸೂರು: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಪತಿ ಕೊಂದ ಆಘಾತಕಾರಿ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದ್ದು, ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ.
ನಂಜನಗೂಡು ತಾಲೂಕು ಮುದ್ದಳ್ಳಿ ನಿವಾಸಿ ದೇವಿ (28) ಕೊಲೆಯಾದ ದುರ್ದೈವಿ. ಪತಿ ರಾಜೇಶ್ ಕೊಲೆ ಆರೋಪಿ. ನಂಜನಗೂಡು ಕಪಿಲಾ ನದಿಯಲ್ಲಿ ಇಬ್ಬರು ಮಕ್ಕಳನ್ನು ಹಾಗೂ ಹೆಂಡತಿಯನ್ನು ಕೊಲ್ಲಲು ರಾಜೇಶ್ ಯತ್ನಿಸಿದ್ದ. ಆದರೆ ಇದನ್ನು ನೋಡಿದ ಸ್ಥಳೀಯರು ತಕ್ಷಣ ಮಕ್ಕಳನ್ನು ರಕ್ಷಿಸಿದ್ದಾರೆ. ಅಸ್ವಸ್ಥ ಮಕ್ಕಳನ್ನು ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೇವಿಯನ್ನು ರಕ್ಷಣೆ ಮಾಡುವಷ್ಟರಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ನಂಜನಗೂಡು ಪೊಲೀಸರು ದಾಖಲಿಸಿಕೊಂಡು, ಆರೋಪಿ ರಾಜೇಶನನ್ನು ಬಂಧಿಸಿದ್ದಾರೆ.