ಮೈಸೂರು: ಪ್ರವಾಸೋದ್ಯಮದ ಹೆಸರಿನಲ್ಲಿ ಮೈಸೂರಿನ ಪುಣ್ಯ ಧಾರ್ಮಿಕ ಕ್ಷೇತ್ರವಾಗಿರುವ ಚಾಮುಂಡಿಬೆಟ್ಟದಲ್ಲಿ ವಿವೇಚನೆ ರಹಿತ ಅಭಿವೃದ್ಧಿ ಯೋಜನೆಯಾದ ರೋಪ್ ವೇ ನಿರ್ಮಾಣ ಮಾಡುತ್ತಿರುವುದಕ್ಕೆ ವಿವಿಧ ಕ್ಷೇತ್ರಗಳ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಸರಸ್ವತಿಪುರಂನಲ್ಲಿ ಇರುವ ಜೆಎಸ್ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಚಾಮುಂಡಿಬೆಟ್ಟ ಉಳಿಸಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಚಾಮುಂಡಿಬೆಟ್ಟದ ಧಾರ್ಮಿಕ ಪಾವಿತ್ರ್ಯತೆ ಮತ್ತು ಪ್ರಾಕೃತಿಕ ಸೌಂದರ್ಯದ ಉಳಿವಿಗಾಗಿ ವಿವಿಧ ಕ್ಷೇತ್ರಗಳ ತಜ್ಞರ ಜತೆ ದುಂಡು ಮೇಜಿನ ಸಭೆಯಲ್ಲಿ ಹತ್ತು-ಹಲವು ಅಭಿಪ್ರಾಯಗಳು ಮೂಡಿಬಂದವಾದರೂ ಎಲ್ಲರಲ್ಲೂ ಒಂದೇ ಭಾವ ವ್ಯಕ್ತವಾಯಿತು. ಅದೇನೆಂದರೆ ಚಾಮುಂಡಿ ಬೆಟ್ಟದ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಬರುವಂತಹ ಹಾಗೂ ಪ್ರಾಕೃತಿಕ ಸೌಂದರ್ಯಕ್ಕೆ ಮಾರಕವಾಗುವಂತಹ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸರ್ಕಾರ ಕೈಗೊಳ್ಳಬಾರದು ಎಂದು ಆಗ್ರಹಿಸಲಾಯಿತು.
ಚಾಮುಂಡಿಬೆಟ್ಟ ಚೂಪಾದ ತುದಿಯ ರಚನೆಯನ್ನು ಹೊಂದಿರುವುದರಿಂದ ಮೇಲ್ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದರೆ ಅದರ ರಚನೆಗೆ ಧಕ್ಕೆಯಾಗಿ ಪರಿಣಾಮ ವ್ಯತಿರಿಕ್ತವಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯುವ ಮೊದಲು ಬೆಟ್ಟದ ಪರಿಸರ ಪ್ರಭಾವದ ಮೌಲ್ಯಮಾಪನ (ಇಐಎ) ವರದಿಯನ್ನು ಖಾಸಗಿಯಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಬೇಕು. ಕಾನೂನಿನ ಮೂಲಕ ಸಂವಿಧಾನಬದ್ಧವಾಗಿ ಚಾಮುಂಡಿಬೆಟ್ಟದ ಪ್ರಾಕೃತಿಕ ಸಂಪತ್ತನ್ನು ಉಳಿಸಲು ಹೋರಾಟ ರೂಪಿಸಬೇಕು. ಕಾನೂನು ವ್ಯಾಪ್ತಿಯ ಹೋರಾಟಕ್ಕೆ ತಕ್ಷಣದಿಂದಲೇ ಪೂರ್ವ ತಯಾರಿಯನ್ನೂ ಮಾಡಿಕೊಳ್ಳಬೇಕು ಎನ್ನುವ ಅಭಿಪ್ರಾಯಗಳು ದುಂಡುಮೇಜಿನ ಸಭೆಯಲ್ಲಿ ಕೇಳಿಬಂದವು.
ಚಾಮುಂಡಿಬೆಟ್ಟವನ್ನು ಭಾವನಾತ್ಮಕವಾಗಿ ನೋಡುವುದರ ಜತೆಗೆ ಅದರ ಭೂ ರಚನೆಯನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಮುಂದಾಗಬಾರದು. ಆ ರೀತಿ ಅಭಿವೃದ್ಧಿ ಕೆಲಸಗಳು ನಡೆದರೆ ಮುಂದೊಂದು ದಿನ ಪ್ರಕೃತಿ ಮುನಿದು ಜೀವ ಸಂಕುಲಗಳ ನಾಶಕ್ಕೆ ಪರೋಕ್ಷವಾಗಿ ಮನುಷ್ಯರು ಕಾರಣವಾಗಬೇಕಾಗುತ್ತದೆ ಎನ್ನುವ ವಿಷಯವೂ ಕೇಳಿಬಂತು.
ದುಂಡುಮೇಜಿನ ಸಭೆಯಲ್ಲಿ ವನ್ಯಜೀವಿ ತಜ್ಞ ಕೃಪಾಕರ ಸೇನಾನಿ, ಪರಂಪರೆ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಭೂಗರ್ಭ ಶಾಸ್ತ್ರಜ್ಞ ಪ್ರೊ.ಜನಾರ್ಧನ, ಪರಿಸರ ತಜ್ಞ ಎ.ಶಿವಪ್ರಕಾಶ್ ಅಡವಣ್ಣೈ, ನಿವೃತ್ತ ಮೇಜರ್ ಜನರಲ್ ಡಾ.ಸುಧೀರ್ ಬಂಬತ್ಕೆರೆ, ಜಲ ತಜ್ಞ ಪ್ರೊ.ಯು.ಎನ್.ರವಿಕುಮಾರ್ ವಿಷಯ ಮಂಡಿಸಿದರು. ಪರಿಸರ ತಜ್ಞ ನಾಗೇಶ್ ಹೆಗಡೆ, ಲೇಖಕರಾದ ರೂಪ ಹಾಸನ, ಪಶ್ಚಿಮಘಟ್ಟ ಪರಿಸರ ಹೋರಾಟಗಾರ ಶಶಿಧರ ಶೆಟ್ಟಿ ಅವರು ಗೂಗಲ್ ಮೀಟ್ ಮೂಲಕ ವಿಷಯ ಮಂಡನೆ ಮಾಡಿದರು.