ಮೈಸೂರು : ಸಮಾಜದ ಜನರ ಬಗೆಗಿನ ಕಾಳಜಿ, ಅವರನ್ನು ಗೌರವಿಸಿ ಅಪ್ಪಿಕೊಳ್ಳುವುದು, ಸತ್ಯದ ದಾರಿಯಲ್ಲಿ ನಡೆಯುವುದು, ಒಳಿತನ್ನು ಮಾಡುವುದು ನಿಜವಾದ ಸಂಸ್ಕೃತಿ. ಇಂತಹ ಸಂಸ್ಕೃತಿಯಿಂದ ಮಾತ್ರ ಬದುಕನ್ನು ಕಟ್ಟಲು ಸಾಧ್ಯ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಹೂಟಗಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಇರುವ ದಕ್ಷ ಪಿ.ಯು. ಕಾಲೇಜು ಹಾಗೂ ಬೆಂಗಳೂರಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ನಮಸ್ತೆ ಸೈನಿಕರೇ’ ಪುಸ್ತಕ ಬಿಡುಗಡೆ ಹಾಗೂ ನಾಡಿನ ವಿವಿಧ ಕ್ಷೇತ್ರದ ಸಾಧಕ ಗಣ್ಯರಿಗೆ ‘ರಾಷ್ಟ್ರೀಯ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ವಿಚಾರಕ್ಕೂ ಸಾಂಸ್ಕೃತಿಕ ಸ್ಪಂದನೆ ತುಂಬಾ ಮುಖ್ಯ. ಹಾಗೆ ಒಳ್ಳೆಯದನ್ನು ಸದಾ ಸ್ಮರಿಸಬೇಕು ಎಂದರು.
ಪ್ರತಿಯೊಬ್ಬ ವ್ಯಕ್ತಿಯೂ ತಂದೆ, ತಾಯಿ, ಗುರುವಿಗೆ ಗೌರವ ನೀಡಬೇಕು. ಜೊತೆಗೆ ರೈತರು ಮತ್ತು ಸೈನಿಕರನ್ನು ಸ್ಮರಿಸಬೇಕು. ಹೊಸದನ್ನು ಶೋಧಿಸುವ ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕು. ನಮ್ಮ ಜೀವನ ಉತ್ತಮವಾಗಿ ಸಾಗಲು ಇವರೆಲ್ಲರ ಕೊಡುಗೆ ಅಪಾರ ಎಂದ ಅವರು, ನಾವು ನಮ್ಮ ಸುತ್ತಲಿನವರಿಗೆ ಪ್ರೀತಿ ಮತ್ತು ನಗು ಹಂಚಬೇಕೆ ಹೊರತು, ಒತ್ತಡಗಳನಲ್ಲ ಎಂದು ಕಿವಿಮಾತು ಹೇಳಿದರು.
ಪುಸ್ತಕ ಕುರಿತು ಸಾಹಿತಿ ಮತ್ತು ಸಂಘಟಕ ಟಿ.ಸತೀಶ್ ಜವರೇಗೌಡ ಮಾತನಾಡಿ, ಭೂಮಿ ಇರುವ ತನಕ ನಾವು ಕೃತಜ್ಞತೆಯಿಂದ ನೆನೆಯಬೇಕಾದದ್ದು ಯೋಧರು ಮತ್ತು ರೈತರನ್ನು. ಇವರಿಬ್ಬರ ಪರಿಶ್ರಮ, ಸೇವೆ, ತ್ಯಾಗದಿಂದ ಇಡೀ ಸಮಾಜ ಶಾಂತಿ, ನೆಮ್ಮದಿ, ಸಂತಸದಿಂದ ಬದುಕುತ್ತಿದೆ. ಯೋಧರು ಗಡಿಯಲ್ಲಿ ಕಾಯುವ ಕಾಯಕ ಮಾಡಿದರೆ, ಅನ್ನದಾತರು ಜನರ ಹಸಿವು ನೀಗಿಸುವ ಕಾಯಕ ಮಾಡುತ್ತಿದ್ದಾರೆ. ಚಳಿ, ಗಾಳಿ, ಮಳೆ, ಬಿಸಿಲೆನ್ನದೆ ಹಗಲಿರುಳು ನಮಗಾಗಿ ಪರಿಶ್ರಮಪಡುವ ಯೋಧ ಮತ್ತು ರೈತರನ್ನು ನಿತ್ಯ ಸ್ಮರಿಸುವುದು ತುಂಬಾ ಅಗತ್ಯ ಎಂದರು.
ಸಾಮಾಜಿಕ ಜಾಲತಾಣದ ಕಳೆದು ಹೋಗಿರುವ ಜನರು ಓದುವ ಹವ್ಯಾಸದಿಂದ ವಿಮುಖರಾಗುತ್ತಿದ್ದಾರೆ. ಇಂತಹ ಆತಂಕದ ನಡುವೆ ಇಂದು ಆತ್ಮಶ್ರೀ ಪ್ರಕಾಶನ ಪುಸ್ತಕ ಪ್ರಕಟಣೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಹೊಸ ಬರಹಗಾರರ ಉತ್ತಮ ಕೃತಿಗಳನ್ನು ಪ್ರಕಟಿಸುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಿ. ಯೋಧರ ಬವಣೆ, ಅವರ ತ್ಯಾಗ ಮತ್ತು ಬಲಿದಾನ, ಹುತ್ತಾತ್ಮರ ಯೋಧರ ಕಟುಂಬದ ತಲ್ಲಣಗಳನ್ನು ‘ನಮಸ್ತೆ ಸೈನಿಕರೇ’ ಕವನ ಸಂಕಲನ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಆ ಮೂಲಕ ಯೋಧರಿಗೆ ಅರ್ಥಪೂರ್ಣ ಕಾವ್ಯ ಗೌರವ ಸಲ್ಲಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಕ್ಷ ಪಿಯು ಕಾಲೇಜಿನ ಅಧ್ಯಕ್ಷ ಡಾ. ಜಯಚಂದ್ರರಾಜು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐ.ಎಫ್.ಎಸ್. ಅಧಿಕಾರಿ ಕೆ.ವಿ. ಲಕ್ಷ್ಮಣ್ ಮೂರ್ತಿ, ಭಾಗ್ಯಶ್ರೀ ಟ್ರಸ್ಟ್ ಅಧ್ಯಕ್ಷ ಡಾ. ನವೀನ್ ಗುರೂಜಿ, ಚಲನಚಿತ್ರ ನಿರ್ಮಾಪಕ ರಾಜ್ ಯಜಮಾನ್, ಕನ್ನಡ ಹೋರಾಟಗಾರರಾದ ಗೋವಿಂದಹಳ್ಳಿ ಕೃಷ್ಣೇಗೌಡ, ಚಳವಳಿ ಚಲಪತಿಗೌಡ, ಸಾಹಿತಿ ಆರ್. ಸದಾಶಿವಯ್ಯ ಜರಗನಹಳ್ಳಿ, ಬಹುಭಾಷಾ ನಟಿ ತನುಷ, ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಕಾರ್ಯದರ್ಶಿ ವರಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.