ಮೈಸೂರು: ಮೈಸೂರಿನ ಪ್ರಮುಖ ಪ್ರವಾಸಿ ತಾಣ ಮತ್ತು ಧಾರ್ಮಿಕ ಕೇಂದ್ರವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಿದ್ದು, ಬೆಟ್ಟಕ್ಕೆ ರಸ್ತೆ ಮಾರ್ಗವಲ್ಲದೆ, ಸಾವಿರ ಮೆಟ್ಟಿಲೇರಿ ತೆರಳುವವರಿದ್ದು ಅವರ ಅನುಕೂಲಕ್ಕಾಗಿ ಮೆಟ್ಟಿಲ ಎರಡು ಬದಿಯಲ್ಲಿ ಗ್ರಿಲ್ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ.
ಈ ಕುರಿತಂತೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮೆಟ್ಟಿಲಿಗೆ ಗ್ರಿಲ್ ಅಳವಡಿಸುವ ಕುರಿತಂತೆ ಸುಳಿವು ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಒತ್ತುವರಿಯನ್ನು ತಪ್ಪಿಸಲು, ಅರಣ್ಯ ಇಲಾಖೆ ಸಿಬ್ಬಂದಿ ಮರು ಸರ್ವೇ ನಡೆಸಿ, ಬೇಲಿ ಹಾಕಬೇಕು. ಜತೆಗೆ ಬೆಟ್ಟದಿಂದ ಹರಿದು ಬರುವ ನೀರನ್ನು ಇಂಗುವಂತೆ ಮಾಡಲು ಸಲಹೆ ನೀಡಿದ್ದಲ್ಲದೆ, ಬೆಟ್ಟದಲ್ಲಿ ಶೀಘ್ರವೇ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಬೆಟ್ಟದ ಮೆಟ್ಟಿಲಿನ ಇಕ್ಕೆಲದಲ್ಲಿ ಗ್ರಿಲ್ ಅಳವಡಿಸುವ ಮೂಲಕ ಚಾಮುಂಡಿ ಬೆಟ್ಟವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಕುರಿತಂತೆ ಮಾತುಕತೆಗಳು ನಡೆದಿತ್ತು. ಹಿಂದಿನ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ಘೋಷಣೆ ಮಾಡಿದ್ದರು. ಇದಕ್ಕೆ ತೀವ್ರ ವಿರೋಧಗಳನ್ನು ಮಾಡಿದ್ದರು. ಇದೀಗ ಗ್ರಿಲ್ ಅಳವಡಿಸಿದರೆ ಎಲ್ಲ ರೀತಿಯಲ್ಲೂ ಸಹಕಾರಿಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.