ಮೈಸೂರು: ಕೇಂದ್ರದಿಂದ ಒಪ್ಪಿಗೆ ಪಡೆದು ತುರ್ತಾಗಿ ಮೇಕೆದಾಟು ಯೋಜನೆ ಆರಂಭಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ರಾಜಕೀಯ ಕಾರಣಕ್ಕಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಮಣಿಯಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ.
ಕಾಮಗಾರಿ ಪ್ರಾರಂಭಿಸುವುದಕ್ಕೆ ಕೋರ್ಟ್ ಆದೇಶ ಕೂಡ ಕ್ಲಿಯರ್ ಆಗಿದೆ. ಹಾಗಾಗಿ ತಮಿಳುನಾಡಿನವರು ರಾಜಕೀಯವಾಗಿ ಕ್ಯಾತೆ ಮಾಡುತ್ತಿರುವ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮೇಕೆದಾಟು ಯೋಜನೆಯ ಕಾಮಗಾರಿಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡುವುದು ತಡವಾಗಿತ್ತು. ಆದರು ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ. ಈಗ ಇವರು ಕಾಮಗಾರಿ ಆರಂಭಿಸಲು ಬಿಜೆಪಿ ಸರ್ಕಾರದವರು ವಿಳಂಬ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದು ಎರಡು ಕಾಲು ವರ್ಷ ಆಯ್ತು. ಏನು ಕೆಲಸಗಳು ಆಗ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ನವರು ತಡವಾಗಿ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಹೇಳಿಕೆಯಲ್ಲಿ ಅರ್ಥ ಇಲ್ಲ. ನಾವು ಈಗ ಕಾಮಗಾರಿ ಆರಂಭಿಸಿ ಎಂದು ಕೇಳುತ್ತಿದ್ದೇವೆ. ಸರ್ಕಾರ ಯಾಕೆ ವಿಳಂಬ ಮಾಡುತ್ತಿದೆ. ಒತ್ತಡ ಏರಲೇಬೇಕಾದ ಸನ್ನಿವೇಶದಲ್ಲೇ ಇದ್ದೇವೆ, ಹಾಗಾಗಿ ಒತ್ತಡ ಹೇರಿದ್ದೇವೆ. ನಾವು ಒತ್ತಡ ಹೇರದಿದ್ದರೆ ಇವರು ಕೆಲಸ ಆರಂಭಿಸುವುದಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರದಿದ್ದದರೆ ಇವರು ಕೆಲಸ ಆರಂಭಿಸುವುದಿಲ್ಲ. ಕೋರ್ಟ್ ಅಡ್ಡಿ ಇದೆ ಎಂಬುದೆಲ್ಲ ಸುಳ್ಳು. ಇದಕ್ಕಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಬಿಟ್ ಕಾಯಿನ್ ವಿಚಾರದಲ್ಲಿ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದವರು ಯಾರೇ ಇರಲಿ. ಮೊದಲು ತನಿಖೆ ಆರಂಭಿಸಿ. ಪ್ರಕರಣ ಕುರಿತು ಚುರುಕಾಗಿ ಯಾಕೆ ತನಿಖೆ ಆರಂಭಿಸುತ್ತಿಲ್ಲ. ನನ್ನ ಬಳಿಯೇ ಸರ್ಕಾರ ಸಾಕ್ಷಿ ಕೇಳುತ್ತಿದೆ. ಅದರ ಸಾಕ್ಷಿ ಹುಡುಕಬೇಕಾದವರು, ತನಿಖೆ ಮಾಡಬೇಕಾದವರು ತನಿಖಾಧಿಕಾರಿಗಳು. ಆ ಕೆಲಸವನ್ನು ಸರ್ಕಾರ ಮಾಡಿಸಲಿ.
ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯವಿದ್ದರೆ ಕೋರ್ಟ್ಗೆ ಕೊಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಇನ್ನು ಸಾಕ್ಷಿಗಳು ಬೇಕಿವೆ. ನಾನು ಸಾಕ್ಷಿಗಳ ಸಂಗ್ರಹದಲ್ಲಿ ಇದ್ದೇನೆ. ನಾನು ನನ್ನ ಬಳಿ ಇರುವ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ ಎಂದರು.
ಶಾಸಕ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಭಾಗಿಯಾಗುತ್ತಾರೆಂಬ ಸುದ್ದಿಯಾದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ, ಯಾಕೆ ನಾವು ಒಂದೇ ವೇದಿಕೆಯಲ್ಲಿ ಬರಬಾರದ..? ಅವರು ಕಾಂಗ್ರೆಸ್ ಸೇರುತ್ತಾರೋ, ಬಿಡುತ್ತಾರೋ ಅದು ಬೇರೆ ವಿಚಾರ. ಜೆಡಿಎಸ್ನ ಗುಬ್ಬಿ ಶಾಸಕ ಶ್ರೀನಿವಾಸ್ ಗೆ ಅನೌಪಚಾರಿಕವಾಗಿ ಪಕ್ಷಕ್ಕೆ ಆಹ್ವಾನಿಸಿದ್ದೆ. ಅದನ್ನು ಇದನ್ನು ನೀವು ಹೋಲಿಸಬೇಡಿ ಎಂದು ತಿಳಿಸಿದರು.