ನಂಜನಗೂಡು: ಯಡಿಯಾಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಾಗೂ ಸಂಗಮದಲ್ಲಿ ತಡೆಗೋಡೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ತಲಾ 30 ಕೋಟಿ ರೂ. ಗಳನ್ನು ಪ್ರಸ್ತುತ ಬಜೆಟ್ ನಲ್ಲಿ ಮಂಜೂರು ಮಾಡುವಂತೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಮನವಿ ಮಾಡಿದ್ದಾರೆ.
ಕಾಡಂಚಿನ ಪ್ರದೇಶದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದ ಯಡಿಯಾಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈ ಬಜೆಟ್ ನಲ್ಲಿ ಹಣ ಒದಗಿಸುವಂತೆ ವಿನಂತಿಸಿದ್ದಾರೆ.
ನಂಜನಗೂಡು ತಾಲೂಕಿನ 12 ಮತ್ತು ಎಚ್.ಡಿ.ಕೋಟೆಯ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಇದರಿಂದ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರಯೋಜನವಾಗಲಿದೆ. ಅಂದಾಜು 30 ಕೋಟಿ ರೂ. ಯೋಜನೆ ಇದಾಗಿದೆ. ನುಗು ನದಿಯಿಂದ ನೀರೆತ್ತುವ ಯೋಜನೆ ಇದಾಗಿದ್ದು, ಹಣ ಬಿಡುಗಡೆಯಾದರೆ ಕೇವಲ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ 2016 -17ರಲ್ಲಿ ವಿ.ಶ್ರೀನಿವಾಸ ಪ್ರಸಾದ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲೇ ಮಂಜೂರಾಗಿದೆ. ಆದರೆ ಹಣದ ಕೊರತೆಯಿಂದಾಗಿ ಜಾರಿಯಾಗಿಲ್ಲ. ಈಗ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಸಾಕಾರಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.
ಇದರೊಂದಿಗೆ ‘ಸಂಗಮ’ದಲ್ಲಿ ‘ಶ್ರೀ ಸದ್ಗುರು ಮಹದೇವ ತಾತಾರವರ ಗದ್ದುಗೆ’ ಹತ್ತಿರ ತಡೆಗೋಡೆ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಾಗಿ ಅಂದಾಜು 30 ಕೋಟಿ ರೂ. ಅನುದಾನವನ್ನು 2022-23 ರ ಅಯವ್ಯಯಕ್ಕೆ ಸೇರಿಸಿ ಅನುದಾನ ಬಿಡುಗಡೆಗೊಳಿಸುವಂತೆ ಶಾಸಕರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.