ನಂಜನಗೂಡು: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿ ಮಾಡದೆ ಪಕೋಡ ಮಾರುವಂತೆ ಕರೆ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ನಂಜನಗೂಡಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಯಾವುದೇ ಕೆಲಸವಾಗಬೇಕಾದರೆ ಕಮೀಷನ್ ನೀಡಬೇಕಾಗಿದೆ ಎಂದು ಆರೋಪ ಮಾಡಿದರು.
ಅಧಿಕಾರಕ್ಕೆ ಬರುವ ಮೊದಲು ಪ್ರಣಾಳಿಕೆ ಯಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಯಾವುದೇ ಉದ್ಯೋಗ ಸೃಷ್ಟಿ ಮಾಡದೆ ನಿರುದ್ಯೋಗಿಗಳು ಹೆಚ್ಚುವಂತೆ ಮಾಡಿದ್ದಾರೆ. ಕಳೆದ ಎಂಟು ವರ್ಷದಲ್ಲಿ ಶೇ 40ರಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿ ಮಾಡದೆ ಪಕೋಡ ಮಾರಲು ಸಲಹೆ ನೀಡುತ್ತಿದ್ದಾರೆ. ಸೂಕ್ತವಾಗಿ ಆರ್ಥಿಕ ನೀತಿಗಳನ್ನು ನಿರ್ವಹಣೆ ಮಾಡದ ಕಾರಣ ಕೈಗಾರಿಕೆಗಳು ಮುಚ್ಚುತ್ತಿವೆ ಇವರ ಸರ್ಕಾರದಲ್ಲಿ ಹಲವಾರು ಭ್ರಷ್ಟಾಚಾರ ಗಳು ನಡೆಯುತ್ತಿವೆ ಎಂದು ದೂರಿದರು.
ಅಭ್ಯರ್ಥಿ ಮಧು ಜಿ ಮಾದೇಗೌಡ ಮಾತನಾಡಿ 1 ಲಕ್ಷ 33 ಸಾವಿರ ಪದವೀಧರರಿದ್ದಾರೆ ನಾನು ಸುಮಾರು 65 ಸಾವಿರ ಮತದಾರರನ್ನು ಭೇಟಿಯಾಗಿದ್ದೇನೆ ಮುಂದಿನ ದಿನಗಳಲ್ಲಿ ಎಲ್ಲರನ್ನೂ ಭೇಟಿ ಮಾಡುತ್ತೇನೆ. ನಾನು ಹೋದ ಕಡೆಲ್ಲೆಲ್ಲ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಜೊತೆಗೆ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಪದವೀಧರರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಿರುವುದು ನನಗೆ ಆನೆ ಬಲ ಬಂದಂತಾಗಿದ್ದು, ಈ ಬಾರಿ ಗೆಲ್ಲುವ ನಿರೀಕ್ಷೆ ಯಿಟ್ಟುಕೊಂಡಿರುವುದಾಗಿ ಹೇಳಿದರು.
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಸೇರಿದಂತೆ ಹಲವರು ಇದ್ದರು.