News Karnataka Kannada
Friday, May 03 2024
ಮೈಸೂರು

ಮೈಸೂರು: ದಲಿತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧ ಎಂದ ನಾರಾಯಣ ಸ್ವಾಮಿ

Mysuru: The Central Government is committed to the welfare of Dalits: Narayana Swamy
Photo Credit : By Author

ಮೈಸೂರು: ಸಾಮಾಜಿಕ ನ್ಯಾಯ  ಸಬಲೀಕರಣ ಇಲಾಖೆ ದಲಿತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಅನುದಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಈ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ  ತರಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳನ್ನು  ಅನುಷ್ಠಾನಗೊಳಿಸುವ ಕುರಿತು ಹಾಗೂ ಸಂಬಂಧಪಟ್ಟ ನಿಯಮ ಹಾಗೂ ಅಧಿನಿಯಮಗಳ ಬಗ್ಗೆ ನಗರದ ಲಲಿತ ಮಹಲ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ದೀನದಲಿತ ಸಮುದಾಯಕ್ಕಾಗಿ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದು ನಮ್ಮ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕರ್ತವ್ಯ. ನರೇಂದ್ರ ಮೋದಿ ಅವರು ಪರಿಚಯಿಸಿದ ಸಾಕಷ್ಟು ಕೌಶಲ್ಯ ಕಾರ್ಯಕ್ರಮಗಳನ್ನು ನಾವು ಹೊಂದಿದ್ದೇವೆ. ಅವರ ದೃಷ್ಟಿಕೋನ ಎಲ್ಲಾ ರಾಜ್ಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಂತ್ರವಾಗಿರಬೇಕು. ಇದಕ್ಕಾಗಿ ರಾಜ್ಯಗಳಿಗೆ ಮೀಸಲಾದ ಹಣವನ್ನು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರ ಎಸ್‌ಸಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನಿಗದಿಪಡಿಸಿದೆ. ಇದು ಎಲ್ಲ ರಾಜ್ಯಗಳಿಗೆ ಮಾದರಿಯಾಗಬೇಕು. ಅಂತಹ ಉತ್ತಮ ಅಭ್ಯಾಸವನ್ನು ಅವರು ಅಳವಡಿಸಿಕೊಳ್ಳಬೇಕು. ಮಹಿಳೆಯರ ಸಬಲೀಕರಣಕ್ಕಾಗಿ ಕೇರಳದ ಕುಟುಂಬಶ್ರೀ ಯೋಜನೆ ಕೂಡ ಉತ್ತಮ ಉದಾಹರಣೆಯಾಗಿದೆ ಎಂದರು.

31 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಎಸ್‌ಸಿ ಸಮುದಾಯದ ಆಕಾಂಕ್ಷಿಗಳಿಗೆ ಉಚಿತ ಯುಪಿಎಸ್‌ಸಿ ಕೋಚಿಂಗ್‌ಗಾಗಿ ಡಾ.ಅಂಬೇಡ್ಕರ್  ಸೆಂಟರ್ ಫಾರ್ ಎಕ್ಸಲೆನ್ಸ್ ಪ್ರಾರಂಭಿಸಿದ್ದೇವೆ. ಸಚಿವಾಲಯ ಎಸ್‌ಸಿ ಉದ್ಯಮಿಗಳಿಗೆ ಸಾಲದ ಮೇಲಿನ ಬಡ್ಡಿಯನ್ನು ಶೇ.8ರಿಂದ ಶೇ.4ಕ್ಕೆ ಇಳಿಸಿದೆ. 10 ಸಾವಿರದಿಂದ 50 ಸಾವಿರದವರೆಗೆ ಸಬ್ಸಿಡಿ ನೀಡುತ್ತಿದೆ. ನಮ್ಮ ಇಲಾಖೆ ಕಾಯಿದೆಗಳು ಮತ್ತು ನಿಯಮಗಳ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ನಡೆಸುತ್ತಿದೆ. ದೇಶದಲ್ಲಿನ ದೀನದಲಿತ ಸಮುದಾಯದ ಅನುಕೂಲಕ್ಕಾಗಿ ರಾಜ್ಯಗಳಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಎಸ್‌ಸಿ, ಎಸ್‌ಟಿ ಜನಾಂಗಗಳಿಗೆ ಸೌಲಭ್ಯ ನೀಡುವಲ್ಲಿ ಕರ್ನಾಟಕ ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು ಈ ಸಮುದಾಯಗಳಿಗೆ 29 ಸಾವಿರ ಕೋಟಿ ರೂ ವೆಚ್ಚ ಮಾಡಿದ್ದೇವೆ. ಎಸ್ಸಿ, ಎಸ್ಟಿ ಜನಾಂಗಗಳ 23 ಲಕ್ಷ ಕುಟುಂಬಗಳಿಗೆ 75 ಯೂನಿಟ್ ಉಚಿತವಾಗಿ ವಿದ್ಯುತ್ ನೀಡಲು 800 ಕೋಟಿ ಖರ್ಚು ಮಾಡಲಾಗುತ್ತದೆ. ಕೇಂದ್ರದ ನವೋದಯ ಮಾದರಿಯಲ್ಲಿ 830  ಕಾಲೇಜುಗಳನ್ನು ಆರಂಭಿಸಿ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ಪ್ರತಿಷ್ಠಿತ ಶಾಲೆಗಳ ಮಟ್ಟದಲ್ಲಿ  ಶಿಕ್ಷಣ ಕೊಡಲಾಗುತ್ತಿದೆ. ಈ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವ 90 ವಿದ್ಯಾರ್ಥಿಗಳು ವಿದೇಶ ವ್ಯಾಸಂಗಕ್ಕೆ ತೆರಳಿದ್ದಾರೆ ಎಂದರು.

ಎರಡು ಸಾವಿರಕ್ಕೂ ಹೆಚ್ಚು ಹಾಸ್ಟೆಲ್ ನಿರ್ಮಿಸಲಾಗಿದೆ. ಎಸ್‌ಸಿ ಪ್ರವರ್ಗದಲ್ಲಿ 101 ಜಾತಿಗಳು ಇದ್ದು ಇವರಿಗೆ ಗಂಗಾ ಕಲ್ಯಾಣ ಹಾಗೂ ಭೂ  ಒಡೆತನ ಯೋಜನೆಯಲ್ಲಿ ನೆರವು ನೀಡಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 7 ಸಾವಿರದಿಂದ 25 ಸಾವಿರದವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕೈಗಾರಿಕೆಗಳನ್ನು ಆರಂಭಿಸುವ ಉದ್ಯಮಿಗಳಿಗಾಗಿ ಕೈಗಾರಿಕಾ ಶೆಡ್ ನಿರ್ಮಾಣಕ್ಕಾಗಿ ಶೇ.75ರಷ್ಟು ಸಹಾಯಧನದೊಂದಿಗೆ 2 ಕೋಟಿವರೆಗೆ ಸಾಲ ಸೌಲಭ್ಯವನ್ನು ಸರ್ಕಾರದ ಗ್ಯಾರಂಟಿ ಯೊಂದಿಗೆ ನೀಡುತ್ತಿದ್ದು, ಕೆಎಸ್‌ಎಫ್‌ಸಿ ವತಿಯಿಂದ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಇದಕ್ಕಾಗಿ 323 ಕೋಟಿಗಳ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಲಕ್ಷದೀಪ, ಅಂಡಮಾನ್, ನಿಕೋಬಾರ್ ರಾಜ್ಯ ಹಾಗೂ  ಕೇಂದ್ರಾಡಳಿತ ಪ್ರದೇಶಗಳಿಂದ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಭಾರತ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು