ಮೈಸೂರು: ಕಾಡಂಚಿನ ಪ್ರದೇಶದಲ್ಲಿನ ಮಾನವ, ಕಾಡು ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಕಾಡಾನೆ ದಾಳಿಗೆ ಹೀರೆಹಳ್ಳಿ ರೈತ ರವಿ ಬಲಿಯಾದ ಹಿನ್ನೆಲೆಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಯ ಹೆಡಿಯಾಲ ಉಪ ವಿಭಾಗದ ಮೊಳೆಯೂರು ವಲಯ ಅರಣ್ಯ ಕಚೇರಿ ಆವರಣದಲ್ಲಿ ನಡೆದ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾಡುಪ್ರಾಣಿಗಳು, ಮಾನವನ ಸಂಘರ್ಷ ಬಹಳಷ್ಟು ವರ್ಷಗಳ ಹಿಂದಿನದು. ಬಂಡೀಪುರ ಅರಣ್ಯ ಪ್ರದೇಶದ ವ್ಯಾಪ್ತಿಯ ಕ್ಷೇತ್ರಕ್ಕೆ ಒಳಪಡುವ 6 ವಲಯಗಳಲ್ಲಿ 21 ಕಿ.ಮೀ.ದೂರ ರೈಲ್ವೆ ಕಂಬಿ ಅಳವಡಿಸಬೇಕಿದೆ. ಅದೇ ರೀತಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ 11 ಕಿ.ಮೀ. ದೂರ ರೈಲ್ವೆ ಕಂಬಿ ಅಳವಡಿಸಬೇಕಿದ್ದು, ರೈಲ್ವೆ ಕಂಬಿ ಅಳವಡಿಸಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿದಂತಾಗಲಿದೆ. ಹೀಗಾಗಿ ಇಲ್ಲಿನ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವರಾದ ಈಶ್ವರ್ಖಂಡ್ರೆ ಅವರೊಂದಿಗೆ ಚರ್ಚಿಸಿ ಕೂಡಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಕಾಡಾನೆಗಳು ಜಮೀನಿನತ್ತ ಬರುವೆಡೆ ಕೇವಲ 10 ಕಿ.ಮೀ.ದೂರವಾದರೂ ರೈಲ್ವೆ ಕಂಬಿ ಅಳವಡಿಸಿದರೆ ಸ್ವಲ್ಪವಾದರೂ ಆನೆ ಹಾವಳಿಗೆ ಕಡಿವಾಣ ಹಾಕಬಹುದು. ರೈತರು ಕಷ್ಟಪಟ್ಟು ಬೆಳೆದ ಬೆಳೆ ಕಾಡುಪ್ರಾಣಿಗಳ ಹಾವಳಿಗೆ ತುತ್ತಾದರೆ ರೈತರ ಪಾಡೇನು? ಇನ್ನು ಮುಂದಾದರೂ ಅಧಿಕಾರಿಗಳು ವಿನಾಕಾರಣ ಹೇಳದೆ ಕೂಡಲೇ ಎಚ್ಚೆತ್ತು ಕೊಂಡು ಕಾಡಾನೆ ಹಾವಳಿ ತಡೆಗೆ ಕ್ರಮವಹಿಸಬೇಕು. ಇಂಥ ಘಟನೆಗಳು ಪುನರ್ ಮರುಕಳಿಸದಂತೆ ಎಚ್ಚರವಹಿಸಬೇಕೆಂದರು.
ರೈಲ್ವೆ ಕಂಬಿ ಅಳವಡಿಸಿರುವ ಕಡೆಗಳಲ್ಲಿ ಹಂದಿಗಳು ನುಸುಳಿಕೊಂಡು ಬರುತ್ತಿವೆ. ರೈತರ ಜಮೀನುಗಳಲ್ಲಿ ಬೆಳೆದ ಬೆಳೆಯನ್ನು ಹಂದಿ, ಜಿಂಕೆ ಇನ್ನಿತರ ಪ್ರಾಣಿಗಳು ತಿಂದು ನಾಶಗೊಳಿಸುತ್ತಿದ್ದು, ಇದರಿಂದಾಗಿ ರೈತರ ಬೆಳೆ ಕೈಗೆ ಸಿಗುತ್ತಿಲ್ಲ. ಇದರ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಹಂದಿ, ಜಿಂಕೆ ಹಾವಳಿ ತಡೆಗೆ ರೈಲ್ವೆ ಕಂಬಿಗಳಿಗೆ ಗುಣಮಟ್ಟದ ಬಲೆಯನ್ನು ಅಳವಡಿಸಿ ರೈತರ ಜಮೀನಿನತ್ತ ಬರದಂತೆ ಸೂಕ್ತ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗೆ ಸರ್ಕಾರ ಸಮರ್ಪಕವಾಗಿ ಸೂಕ್ತ ಪರಿಹಾರ ನೀಡುತ್ತಿಲ್ಲ. ರೈತರ ಬೆಳೆಗೆ ಕಡಿಮೆ ಬೆಲೆ ನಿಗದಿಪಡಿಸಿ ಪರಿಹಾರ ನೀಡುತ್ತಿರುವುದರಿಂದ ತುಂಬಾ ಕಷ್ಟಕರವಾಗಿದೆ. ಹೀಗಾಗಿ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು ಪಿ.ಕೆ. ರಮೇಶ್ಕುಮಾರ್ ಮಾತನಾಡಿ, ಕಾಡಾನೆ ಹಾವಳಿ ತಡೆಗೆ ಕೂಡಲೇ ಕ್ರಮವಹಿಸಲಾಗುವುದು. ಸಿಬ್ಬಂದಿ ಕೊರತೆ ಇದ್ದು, ರೈಲ್ವೆ ಕಂಬಿ ರಿಪೇರಿ ಇರುವೆಡೆ ಅಂದಾಜು ಪಟ್ಟಿ ರಚಿಸಿ, ಕಾಮಗಾರಿ ಆರಂಭಿಸಲಾಗುವುದು. ಹೂಳು ತೆಗೆಸಿ, ಸೋಲಾರ್ ಪೆನ್ಸ್ ಅಳವಡಿಸಲಾಗುವುದು.
ಇದಲ್ಲದೆ ಕಂದಾಯ ಇಲಾಖೆ, ಕೆಇಬಿ ಇಲಾಖೆ ಸಮಸ್ಯೆಗಳನ್ನೂ ರೈತರು ಸಭೆಯಲ್ಲಿ ದೂರಿದರು. ಇದಕ್ಕೆ ಸ್ಥಳದಲ್ಲೇ ಇದ್ದ ಇಲಾಖಾಧಿಕಾರಿಗಳು ಸ್ಪಷ್ಟನೆ ನೀಡಿದರು. ಅಧಿಕಾರಿಗಳು ರೈತರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೇ ತುರ್ತಾಗಿ ಮಾಡಿಕೊಡುವಂತೆ ಶಾಸಕ ಅನಿಲ್ ಚಿಕ್ಕಮಾದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಂ ಎನ್ ಭೀಮರಾಜು ಮಾತನಾಡಿ ಎಲ್ಲಾ ಕಡೆಯಲ್ಲೂ ಆನೆಗಳ ಲೂಟಿ ಜಾಸ್ತಿ ಆಗಿರುವುದರಿಂದ ಎಲಿಫೆಂಟ್ ಫೋರ್ಸ್ ಸ್ಟಾಪ್ನ್ನು ಶೀಘ್ರದಲ್ಲೇ ವ್ಯವಸ್ಥೆ ಮಾಡಿ, ಸಂಬಂಧಪಟ್ಟಂತಹ ನಮ್ಮ ಭಾಗಗಳಲ್ಲಿ ಆನೆಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದಂತೆ ಸಹಾಯವಾಣಿ ಇಲ್ಲ, ಅಂದರೆ ನಾಗರಹೊಳೆ ಇನ್ನಿತರ ಕಡೆ ಆನೆ ಸಂಬಂಧಪಟ್ಟ ಸಹಾಯವಾಣಿ ಇದೆ. ಇನ್ನು ಮುಂದಾದರೂ ನಮ್ಮಲ್ಲಿ ಶೀಘ್ರವಾಗಿ ಇದನ್ನು ಮಾಡಿ ಎಂದು ಸಲಹೆ ನೀಡಿದರು.