ಮೈಸೂರು: ಪರೀಕ್ಷಾರ್ಥವಾಗಿ ಬೇಬಿ ಬೆಟ್ಟದ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ಗೆ ಭಾರಿ ವಿರೋಧ ವ್ಯಕ್ತವಾಗಿರುವ ಬೆನ್ನೆಲ್ಲೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರೂ ಟ್ರಯಲ್ ಬ್ಲಾಸ್ಟ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ಜಲಾಶಯದ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆಗೂ ಅವಕಾಶ ಕೊಡಬಾರದು. ಅಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಕೂಡ ಸರಿಯಲ್ಲ. 1950ರ ಕಾಲದಿಂದ ಬೇಬಿ ಬೆಟ್ಟದ 1,650 ಎಕರೆ ರಾಜವಂಶಸ್ಥರಿಗೆ ಸೇರಿದೆ. ಭಾರತ ಸರ್ಕಾರದ ಜೊತೆ ಮೈಸೂರು ಸಂಸ್ಥಾನ ಮಾಡಿಕೊಂಡ ಆಸ್ತಿ ಹಂಚಿಕೆಯ ಪತ್ರದಲ್ಲಿ ಬೇಬಿ ಬೆಟ್ಟ ಇದೆ. ಇದು ಖಾಸಗಿ ಆಸ್ತಿ. ಇದರಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಸರಿಯಲ್ಲ ಎಂದರು.
ಟ್ರಯಲ್ ಬ್ಲಾಸ್ಟ್ಗೆ ತಜ್ಞರು ಸರಕಾರಿ ಜಾಗ ಗುರುತಿಸಿಕೊಳ್ಳಬೇಕು. ಬೇಬಿ ಬೆಟ್ಟದ ಜಾಗವನ್ನು ಉದ್ದೇಶ ಪೂರ್ವಕವಾಗಿ ಬಿ ಖರಾಬ್ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ನಾನು ಆ ಜಾಗದ ವಿಚಾರದಲ್ಲಿ ಕೋರ್ಟ್ಗೆ ಹೋಗಿರಲಿಲ್ಲ. ಮೈಸೂರಿನ ಕುರುಬಾರಹಳ್ಳಿ ಬಿ ಖರಾಬ್ ಜಾಗದ ವಿವಾದದಲ್ಲಿ ಸುಪ್ರೀಂಕೋರ್ಟ್ನಲ್ಲಿ ಅರಮನೆಗೆ ಜಯವಾಗಿದೆ. ಆ ತೀರ್ಪು ಈ ಬೆಟ್ಟದ ಜಾಗಕ್ಕೂ ಅನ್ವಯವಾಗಲಿದ್ದು, ಆ ಜಾಗ ನಮ್ಮ ವ್ಯಾಪ್ತಿಗೆ ಬಂದರೆ ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲ್ಲ ಎಂದರು.
ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಾವೇನು ಯಾರೋದು ಆಸ್ತಿ ಕಬಳಿಸಲು ಹೊರಟ್ಟಿಲ್ಲವೇ ಎಂಬ ರೀತಿ ಯೋಚಿಸುತ್ತಿವೆ. ಇದು ನಮಗೆ ಸರ್ಕಾರ ಕೊಡುತ್ತಿರುವ ಕಿರುಕುಳವಾಗಿದೆ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರ್ಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
10 ರೂಪಾಯಿ ಬೆಲೆ ಬಾಳುವುದನ್ನು 10 ಪೈಸೆಗೆ ತೆಗೆದು ಕೊಳ್ಳುವ ಮನಸ್ಥಿತಿ ಸರ್ಕಾರ ಪ್ರದರ್ಶಿಸುತ್ತಿದೆ. ಸರ್ಕಾರಕ್ಕೆ ನಾನು ಧನ್ಯವಾದ ಹೇಳ್ತಿದ್ದಿನಿ. ಬೇಬಿ ಬೆಟ್ಟದ ವಿಚಾರದಲ್ಲಿ ಈಗ ಕಾನೂನು ತಜ್ಞರ ಜೊತೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.