ತುಮಕೂರು: ಬಾಬು ಜಗಜೀವನ ರಾಮ್ರವರು ಬರಡಾದ ಭೂಮಿಯಲ್ಲಿ ಹಸಿರನ್ನು ಚಿಮ್ಮಿಸಿದವರು, ನಿರ್ಮಲ ಮನಸ್ಸಿನ ಗಾಂಧೀವಾದಿ, ನವಭಾರತದ ಕಟ್ಟಾಳು, ದೇಶದ ಕಣ್ಮಣಿ ಎಂದು ಪ್ರಾಧ್ಯಾಪಕ ಡಾ. ಓ. ನಾಗರಾಜ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ರಾಮ್ ಅಧ್ಯಯನ ಪೀಠ ಮಂಗಳವಾರ ಆಯೋಜಿಸಿದ್ದ ‘ನವಭಾರತ ನಿರ್ಮಾಣ- ಡಾ.ಜಗಜೀವನ್ರಾಮ್ ಅವರ ಕೊಡುಗೆಗಳು’ ಮತ್ತು ಅಂತರ್ ಕಾಲೇಜು ವಿಶೇಷೋಪನ್ಯಾಸಗಳ ಮಾಲಿಕೆಯಲ್ಲಿ ಮಾತನಾಡಿದ ಅವರು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯುವುದರಿಂದ ಯುವಕರಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ಯುವ ಸಮುದಾಯಕ್ಕೆ ಸಾಧಕರ ಮನವರಿಕೆಯಾಗುತ್ತದೆ ಎಂದರು.
ಡಾ. ಬಾಬು ಜಗಜೀವನ ರಾಮ್ ಸಂಶೋದನ ಸಂಸ್ಥೆಯ ಆಡಳಿತಾಧಿಕಾರಿಗಳಾದ ಜಿ.ಡಿ ಚಿತ್ತಣ್ಣ ಮಾತನಾಡಿ, ದೇಶದ ಪ್ರಗತಿಯಲ್ಲಿ ಯುವಕರು ಮತ್ತು ಯುವತಿಯರ ಪಾತ್ರ ಪ್ರಮಖವಾದದ್ದು. ಸಂಶೋಧನೆ ಮತ್ತು ಅಧ್ಯಯನ ಮೂಲಕ ವಿದ್ಯಾರ್ಥಿಗಳಿಗೆ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪರಿಚಯಿಸುವುದರಿಂದ ಓದಿನ ಕಡೆ ಹೆಚ್ಚು ಗಮನ ಕೊಡಬಲ್ಲರು. ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯದೆ ಹೋದರೆ ವಿಧ್ಯಾರ್ಥಿಗಳು ಓದುವುದು ವ್ಯರ್ಥ. ದೀನದಲಿತರು ಮುಂದೆ ಬರಬೆಕಾದರೆ ಶಿಕ್ಷಣ ಒಂದೇ ಮಾರ್ಗ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ವಿದ್ಯಾರ್ಥಿಗಳು ಕಲಿಕೆಯ ವಯಸ್ಸಿನಲ್ಲಿ ಕಲಿಯಬೇಕು, ಮೊದಲನೇ ಪ್ರಾಶಸ್ತ್ಯ ಕಲಿಕೆಗೆ ನೀಡಬೇಕೆಂದು ಕಿವಿಮಾತು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ನಿರ್ಮಲ್ ರಾಜು, ಸಿಂಡಿಕೇಟ್ ಸದಸ್ಯ ರಾಜು, ಸುನಿಲ್ ಪ್ರಸಾದ್, ಡಾ. ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಅರುಣ್ ಫುರ್ಟಾಡೊ, ಪೀಠ ಸಂಚಾಲಕರಾದ ಡಾ. ದ್ವಾರಕಾನಾಥ್ ವಿ. ಉಪಸ್ಥಿತರಿದ್ದರು.