ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿತ ಅಧಿಕಾರಿಗಳ ಕಾರ್ಯಾಲಯದಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಈಟ್ ರೈಟ್ ವಾಕಥಾನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಭಾನುವಾರ ಬೆಳಗ್ಗೆ ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಿದ್ದ ವಾಕಥಾನ್ಗೆ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ಆಯುಕ್ತ ಡಾ.ಹರೀಶ್ವರ್ ಚಾಲನೆ ನೀಡಿ, ಮಾತನಾಡಿದ ನಮಗೆ ಸ್ವಾತಂತ್ರ ಬಂದು 75 ವರ್ಷಗಳು ಸಂದಿವೆ. ಮೊದಲು ದೇಶದಲ್ಲಿ ಹಸಿವು ತಾಂಡವವಾಡುತ್ತಿತ್ತು. ಹಸಿರು ಕ್ರಾಂತಿ ಆದ ನಂತರ ಜನರಿಗೆ ಅಗತ್ಯ ಆಹಾರ ದೊರಕುತ್ತಿದೆ. ಆದರೆ, ನಾವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶವಿರಬೇಕು.
ಆರೋಗ್ಯವನ್ನು ಕಾಪಾಡಬಲ್ಲ ಅಂಶಗಳಿರಬೇಕು. ತಿನ್ನುವ ಆಹಾರದಿಂದ ರೋಗ ಮುಕ್ತವಾಗಬೇಕು ಎಂಬುದಷ್ಟೇ ಇಂದಿನ ತುರ್ತು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದ ೭೫ ನಗರಗಳಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾದ ವಾಕಥಾನ್, ದೊಡ್ಡ ಗಡಿಯಾರ, ಮಕ್ಕಾಜಿ ಚೌಕ, ದೇವರಾಜ ಮಾರುಕಟ್ಟೆ ಮೂಲಕ ದೇವರಾಜ ಅರಸು ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತ್ಯಗೊಂಡಿತು.
ವಾಕಥಾನ್ನಲ್ಲಿ ನೋಡೆಲ್ ಅಧಿಕಾರಿ ಡಾ.ಮೇಟಿ, ಅಂಕಿತ ಅಧಿಕಾರಿಗಳಾದ ಡಾ.ಪ್ರಸಾದ್, ಡಾ.ಅನಿಲ್, ಯುವರಾಜ ಕಾಲೇಜಿನ ಡಾ.ಶೇಖರ್ ನಾಯಕ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಮತ್ತಿತರರು ಹಾಜರಿದ್ದರು. ನಂತರ ನೆಕ್ಸಸ್ ಮಾಲ್ನಲ್ಲಿ ಈಟ್ ರೈಟ್ ಅಂಗವಾಗಿ ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲಿ ಸುರಕ್ಷಿತ ಆಹಾರ ಹಾಗೂ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.