ಮೈಸೂರು: ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಂಗೀತ ಸಹಕಾರಿಯಾಗುತ್ತದೆ ಎಂದು ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.
ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ತಾಲವಾದ್ಯ ಪ್ರತಿಷ್ಠಾನ ವತಿಯಿಂದ ಇಂದು ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ರವರ 13ನೇ ಬೆಲೆ ಸ್ಮರಣಾ ಕಾರ್ಯಕ್ರಮದಲ್ಲಿ ಡಾ.ಗಂಗೂಬಾಯಿ ಹಾನಗಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಕರ್ನಾಟಕ ಸಂಗೀತದ ಕೇಂದ್ರ ಸ್ಥಾನದಂತಿರುವ ಮೈಸೂರು ನಗರದಲ್ಲಿ ಹಿಂದೂಸ್ತಾನಿ ಸಂಗೀತದ ಮೇರು ಕಲಾವಿದರೊಬ್ಬರ ಸಂಸ್ಮರಣೆ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿ ತೋರುತ್ತಿದೆ ಎಂದರು.
ಎಲ್ಲಾ ಕಲೆಗಳೂ ಬದುಕಿಗೆ ಸರ್ವೋತ್ಕೃಷ್ಟ ಸಂತೋಷ ನೀಡಬಲ್ಲವೇ ಆಗಿವೆ. ಆದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೋಡಿಗೆ ಒಮ್ಮೆ ಒಳಗಾದರೆ ಅದರಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲದಷ್ಟು ಅದು ಮನಸ್ಸನ್ನು ಆಕ್ರಮಿಸಿಕೊಂಡು ಬಿಡುತ್ತದೆ. ಗಂಗೂಬಾಯಿಯವರ ತಾಯಿ ಸ್ವತಃ ಕರ್ನಾಟಕ ಶೈಲಿಯ ಅದ್ಭುತ ಗಾಯಕಿಯಾಗಿದ್ದರೂ ಮಗಳಿಗೆ ಹಿಂದೂಸ್ತಾನಿ ಗಾಯಕಿಯಾಗಿಸಬೇಕೆಂಬ ಹುಚ್ಚು ಹತ್ತಿಸಿಕೊಂಡವರಂತೆ. ಕರ್ನಾಟಕ ಸಂಗೀತದ ಪರಿಣಾಮ ಗಂಗೂಬಾಯಿಯವರ ಹಾಡಿಗೆ ತೊಂದರೆ ಉಂಟು ಮಾಡಬಾರದೆಂದು ತಾನು ಹಾಡುವುದನ್ನೇ ನಿಲ್ಲಿಸಿದ ಮಹಾತಾಯಿಯಂತೆ. ಗಂಗೂಬಾಯಿಯವರ ಸಾಧನೆ ಅವರ ತಾಯಿಯ ಕನಸೂ ಆಗಿತ್ತು ಎಂದು ಹೇಳಿದರು.
ಮಕ್ಕಳಲ್ಲಿ ಸಂಗೀತ ಸಾಹಿತ್ಯದ ಆಸಕ್ತಿಯನ್ನು ಹುಟ್ಟುಹಾಕಿ ಪೋಷಿಸುವಲ್ಲಿ ಹೆತ್ತವರ ಪಾತ್ರ ಎಷ್ಟಿರುತ್ತದೆಂಬುದನ್ನು ಗಂಗೂಬಾಯಿಯವರ ತಾಯಿ ಸಾಬೀತು ಮಾಡಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳ ಬದುಕಿನ ಹಾಗೆ ಜೀವನದ ಏಳು ಬೀಳುಗಳ ನಡುವೆ ಹೆಣ್ಣೊಬ್ಬಳು ಸಾಧನೆಯ ಉತ್ತುಂಗಕ್ಕೇರಿದ ರೀತಿಯೇ ಅತ್ಯದ್ಭುತವಾದದ್ದು. ಸಂಗೀತದ ಶ್ರೇಷ್ಠ ಗೌರವಗಳೆಲ್ಲ ಈ ಪುಟ್ಟ ಜೀವದ ಮಹಾನ್ ಸಾಧಕಿಯ ಮಡಿಲು ಸೇರಿದ ಕ್ರಮವೇ ರೋಮಾಂಚಕ. ಹೀಗಾಗಿ ಇಂಥ ಮೇರು ಗಾಯಕಿಯೊಬ್ಬರನ್ನು ನೆನಪಿಸಿಕೊಳ್ಳುವುದು ಅತ್ಯಂತ ಗೌರವಯುತ ಕೆಲಸ. ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿಯವರ ಹೆಸರನ್ನಿರಿಸಿದೆ ರಾಜ್ಯ ಸರಕಾರ. ಅದು ಮತ್ತೆ ಮತ್ತೆ ಯುವ ಮನಸ್ಸುಗಳ ನಡುವೆ ಗಂಗೂಬಾಯಿಯವರ ಹೆಸರನ್ನು ಜೀವಂತವಾಗಿರಿಸಬಲ್ಲುದು. ಅದು ಮೈಸೂರಿನಲ್ಲೇ ಇದೆ ಎನ್ನುವುದು ನಮ್ಮ ಹೆಮ್ಮೆ. ಈ ವಿಶ್ವವಿದ್ಯಾಲಯವನ್ನು ಗಟ್ಟಿಯಾಗಿ ಬೆಳೆಯಬೇಕಾದ ಜವಾಬ್ದಾರಿಯನ್ನು ಸರಕಾರ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ ಇವತ್ತು ಡಾ. ಗಂಗೂಬಾಯಿ ಹಾನಗಲ್ ರವರ ಸಂಸ್ಮರಣಾ ಇಲ್ಲಿ ನಡೆಯುತ್ತಿದ್ದ ಭಾಗಿಯಾಗಿರುವುದು ಸಂತಸ ತಂದಿದೆ ಗಂಗೂಬಾಯಿ ಹಾನಗಲ್ ರವರ ಹೆಸರನ್ನು ರಾಜ್ಯದಲ್ಲಿ ದೇಶದಲ್ಲಿ ಕೇಳದೆ ಇರುವವರೇ ಇಲ್ಲ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈಗಾಗಲೇ ಅವರ ಹೆಸರಿನಲ್ಲಿ ಒಂದು ಸಂಗೀತ ವಿಶ್ವವಿದ್ಯಾನಿಲಯವೇ ಪ್ರಾರಂಭಿಸಲಾಗಿದೆ ಇವರು ಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದುದು ಶಿಷ್ಯರು ಲಕ್ಷಾಂತರ ಮಂದಿ ಇವರ ಶಿಷ್ಯರಾಗಿ ಬೆಳೆದಿದ್ದಾರೆ ಗಂಗೂಬಾಯಿ ಹಾನಗಲ್ ರವರು ಆ ಸಂದರ್ಭದಲ್ಲಿ ಕಚೇರಿ ನಡೆಸುತ್ತಿದ್ದ ಸಂದರ್ಭದಲ್ಲಿ ಕಲೆ ಎನ್ನುವುದು ಸೇವೆಗೆ ಮೀಸಲಾಗಿತ್ತು ಇಂದು ಅದು ವ್ಯಾಪಾರೀಕರಣವಾಗುತ್ತಿದೆ. ಸರ್ಕಾರ ಕಲೆಗೋಸ್ಕರ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಎಂ ಎಸ್ ಜಯರಾಮ್, ಪಂಡಿತ್ ಡಾ.ಶಿವಕುಮಾರ್, ವಿದ್ವಾನ್ ವಿಶ್ವನಾಥ್, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ಡಾ.ಸಿ ಆರ್ ರಾಘವೇಂದ್ರ ಪ್ರಸಾದ್, ವಿದ್ವಾನ್ ನಾಗೇಂದ್ರ ಪ್ರಸಾದ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷರಾದ ರವಿಶಂಕರ್, ತಬಲಾ ಜಗದೀಶ್, ರೇಖಾ ರಾಜು, ಸುಚೀಂದ್ರ, ಗಾಯಕರಾದ ಪುರುಷೋತ್ತಮ್ ಇನ್ನಿತರರು ಭಾಗವಹಿಸಿದ್ದರು.