ಮೈಸೂರು: ಈ ವರ್ಷದ ದಸರಾ ಮಹೋತ್ಸವಕ್ಕೆ 90 ದಿನಗಳು ಬಾಕಿ ಇದೆ. ಪ್ರವಾಸೋದ್ಯಮ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರವಾಸೋದ್ಯಮವನ್ನು ಪ್ರವಾಸಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಅರಮನೆ ಮಂಡಳಿ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸಮಸ್ಯೆಯಾದರೆ ಎಲ್ಲಿ ದೂರು ಕೊಡಬೇಕು ತಿಳಿಯುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಟೂರಿಸ್ಟ್ ಪೊಲೀಸ್ ಮಾಡಬೇಕಾ? ಅಗತ್ಯ ಇದೆಯಾ? ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಹಾಗೆಯೇ ಮೈಸೂರಿಗೆ ಬರುವ ಪ್ರವಾಸಿಗರಿಗೆ ಟೂರಿಸ್ಟ್ ಪಾಸ್ ಕೊಡಲು ಚಿಂತನೆ ಮಾಡಲಾಗಿದೆ. ಇದರಿಂದ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ ಎಂದರು.
ತಮ್ಮ ಇಲಾಖೆ ಅಧೀನದಲ್ಲಿರುವ ಜಂಗಲ್ ಅಂಡ್ ಲಾಡ್ಜಸ್ಗಳ ರೂಂ ಭರ್ತಿ ಪ್ರಮಾಣವನ್ನು ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೋವಿಡ್ನಿಂದ 2021ರಲ್ಲಿ 61 ಕೋಟಿ ರೂ. ಆದಾಯವಾಗಿದೆ. 2022-23ಕ್ಕೆ 111 ಕೋಟಿ ರೂ.ಗೆ ಏರಿಕೆಯಾಗಿದೆ. ಶೇ.47 ರೂಂಗಳಷ್ಟೇ ಭರ್ತಿಯಾಗುತ್ತಿವೆ. ಈ ಪ್ರಮಾಣವನ್ನು ಶೇ.75ಕ್ಕೆ ಏರಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದರ ಹೆಚ್ಚಿದೆ. ವಿಶೇಷ ಪ್ಯಾಕೇಜ್ ಕೊಡಲಾಗದು. ಶೇ.75 ರೂಂ ಭರ್ತಿ ಕಷ್ಟವೆಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ರಾಷ್ಟ್ರೀಯ ಆಸ್ತಿ ಉಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ವಿಶೇಷ ಅಧಿಕಾರ ಕೊಟ್ಟಿದ್ದು, 2023-24ರಲ್ಲಿ ಶೇ.66 ಗುರಿ ಮುಟ್ಟುವಂತೆ ಹೇಳಿದ್ದೇನೆ ಎಂದು ವಿವರಿಸಿದರು.
ವಸ್ತುಪ್ರದರ್ಶನ ಪ್ರಾಧಿಕಾರ ಕೆಲಸದ ಅಸಮಾಧಾನ ವ್ಯಕ್ತಪಡಿಸಿದ್ದೇನೆ. 80 ಎಕರೆ ಜಾಗವನ್ನು ಉದ್ದೇಶಿತ ಕಾರಣಕ್ಕೆ ಬಳಸಲಾಗುತ್ತಿಲ್ಲ. ಹಾಗಾಗಿ ವರ್ಷಪೂರ್ತಿ ಅಲ್ಲಿ ಏನೇನು ಚಟುವಟಿಕೆ ಮಾಡಬಹುದು. ಪ್ರತಿ ಜಿಲ್ಲೆಯ ಸಂಸ್ಕೃತಿ ಪರಂಪರೆ ಪ್ರದರ್ಶನಕ್ಕೆ ಅವಕಾಶ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕರ್ನಾಟಕ ವಸ್ತು ಪ್ರದರ್ಶನ ಬಲವರ್ಧನೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆ ಮಾಡಲಾಗುವುದು. ಈ ತಂಡದ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೈಸೂರಿನ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಒತ್ತು ಕೊಡಲಾಗುವುದು. ನಮ್ಮ ಸಂಸ್ಕೃತಿ ಇತಿಹಾಸ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಎಸಿಎಸ್ ಕಪಿಲ್ ಮೋಹನ್, ಕಾರ್ಯದರ್ಶಿ ರಾಮ್ ವಿಲಾಸ್ ಪ್ರಸಾದ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.