ಮೈಸೂರು: ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಮಾತ್ರ ಆಚರಿಸಿಲ್ಲ. ವೈಮನಸ್ಸು ಉಂಟಾಗಿದ್ದ ಎರಡು ಸಮುದಾಯಗಳ ಹೃದಯ ಬೆಸೆಯುವ ಕಾರ್ಯ ಮಾಡಿದ್ದೇವೆ. ಇದೇ ಭಾರತ್ ಜೋಡೋ ಉದ್ದೇಶವೂ ಆಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1993ರಲ್ಲಿ ನಡೆದ ಘಟನೆಯಿಂದ ಬದನವಾಳು ದಲಿತರು ಮತ್ತು ಸರ್ವಣೀಯರ ಓಡಾಡುವ ಸಂಪರ್ಕ ರಸ್ತೆ ಮುಚ್ಚಲಾಗಿತ್ತು. ಎರಡು ಸಮುದಾಯಗಳ ಮುಖಂಡರ ಮನವೊಲಿಸಿ, ಆ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಆ ರಸ್ತೆಗೆ ಭಾರತ್ ಜೋಡೋ ಹೆಸರಿಡಲಾಗಿದೆ ಎಂದರು.
ಎರಡು ಸಮುದಾಯಗಳ ಜನರ ಮನಸ್ಸು ತಿಳಿಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಎಲ್ಲರೊಂದಿಗೆ ಸಹಭೋಜನ ಮಾಡಿದ್ದೇವೆ. ಕೆಲವು ಮನೆಗಳು, ಅಂಗನವಾಡಿ ಕೇಂದ್ರಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ ಎಂದು ತಿಳಿಸಿದರು.
1927 ಮತ್ತು 1938ರಲ್ಲಿ ಮಹಾತ್ಮ ಗಾಂಧಿ ಅವರು ಬದನವಾಳು ಖಾದಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿ ಅರ್ಧದಿನ ಪಾದಯಾತ್ರೆ ಮೊಟುಕು ಮಾಡಿದ ರಾಹುಲ್ ಗಾಂಧಿ ಅವರು ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಿದ್ದಾರೆ. ಸಹಪಂಕ್ತಿ ಭೋಜನ, ಭಜನೆ, ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು ಎಂದು ವಿವರಿಸಿದರು.
ಭಾರತ್ ಜೋಡೋ ಯಾತ್ರೆ ಮೈಸೂರಿನಲ್ಲಿ ಸಂಚರಿಸುವಾಗ ಕಪ್ಪು ಬಾವುಟ ಪ್ರದರ್ಶಿಸಿದರೆ ಅದರ ಫಲವನ್ನು ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಕಪ್ಪು ಬಾವುಟ ಹಂಚಿರುವುದು ತಿಳಿದು ಬಂದಿದೆ. ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತರೊಂದಿಗೆ ಮಾತನಾಡುತ್ತೇನೆ. ಕಪ್ಪು ಬಾವುಟ ಪ್ರದರ್ಶಿಸಿಸುವುದು, ಕಾರಿಗೆ ಮೊಟ್ಟೆ ಎಸೆಯುವುದು ಬಿಜೆಪಿಯವರ ಸಂಸ್ಕೃತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಬಲಿದಾನ ಕೊಟ್ಟವರು ಕಾಂಗ್ರೆಸ್ ನಾಯಕರು. ಕಪ್ಪು ಬಾವುಟ ಪ್ರದರ್ಶಿಸಿದರೆ ಅದರ ಪ್ರತಿಫಲವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.