ಮೈಸೂರು: ಗುಜರಾತ್ ಸರ್ಕಾರದ ಇಂಡೆಕ್ಸ್ಟ್ – ಸಿ ಸಂಸ್ಥೆಯ ಸಹಯೋಗದೊಂದಿಗೆ ಗುಜರಾತ್ನ ಸಾಂಸ್ಕೃತಿಕ ಕಲೆ ಮತ್ತು ಸಂಸ್ಕೃತಿಯ ಮೈಸೂರಿನ ಕಲಾಕೃತಿ ಪ್ರಿಯರಿಗೆ ತಲುಪಿಸುವ ಸಲುವಾಗಿ ನಗರದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಆಯೋಜಿಸಿರುವ ಗುಜರಾತ್ ಕರಕುಶಲ ಉತ್ಸವಕ್ಕೆ ಶನಿವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಚಾಲನೆ ನೀಡಿದ್ದಾರೆ.
ಗುಜರಾತ್ ಸರ್ಕಾರವು ಕರಕುಶಲ ಕುಶಲಕರ್ಮಿಗಳ ಅನುಕೂಲಕ್ಕಾಗಿ ಈ ಉತ್ಸವವನ್ನು ಜು.10ರವರೆಗೆ ನಡೆಯಲಿದ್ದು, ಗುಜರಾತ್ ರಾಜ್ಯದ ವಿವಿಧ ಭಾಗಗಳಿಂದ 90 ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಭಾಗವಹಿಸಿದ್ದಾರೆ.
ಗುಜರಾತಿನ ಸುಮಾರು 50 ಕ್ಕೂ ಹೆಚ್ಚು ನೃತ್ಯ ಕಲಾವಿದರು ಅಲ್ಲಿಯ ಸುಪ್ರಸಿದ್ಧ ಗರ್ಬಾ ನೃತ್ಯವನ್ನು ಕಾರ್ಯ ಕ್ರಮದ ಪ್ರಾರಂಭದ ಮೊದಲ ಮೂರು ದಿವಸಗಳ ಸಂಜೆಯಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಪ್ರದರ್ಶಿಸಲಿದ್ದಾರೆ. ನೃತ್ಯ ಪ್ರಿಯರು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಸ್ವತಃ ಈ ನೃತ್ಯ ಕಲಾವಿದರೊಂದಿಗೆ ನೃತ್ಯ ಮಾಡಿ ಮನರಂಜನೆ ಪಡೆಯಬಹುದಾಗಿದೆ. ಶಾಲಾ ಮಕ್ಕಳಿಗೆ ಹಾಗು ಮಹಿಳೆಯರಿಗೆ ಗುಜರಾತ್ ಕರಕುಶಲ ಹಾಗೂ ಕಲೆಗಳ ತರಬೇತಿಯನ್ನು ಉಚಿತವಾಗಿ ಉತ್ಸವದ ಸಂದರ್ಭದಲ್ಲಿ ಕರಕುಶಲಕರ್ಮಿಗಳು ನೀಡಲಿದ್ದಾರೆ.
ಮೈಸೂರಿನ ಜಿಲ್ಲಾಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜೆ ಎಸ್ ಎಸ್ ಮಹಾವಿದ್ಯಾಪೀಠದ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನೆ ವಿಭಾಗದ ನಿರ್ದೇಶಕ ಕೆ.ಆರ್. ಸಂತಾನಂ, ಜೆಎಸ್ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ, ಇಂಡೆಕ್ಸ್ಟ್ – ಸಿ ನ ಮಾರುಕಟ್ಟೆ ವ್ಯವಸ್ಥಾಪಕರಾದ ಡಾ.ಸ್ನೇಹಲ್ ಮಕ್ವಾನ, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನ ಯೋಜನಾಧಿಕಾರಿ ಎಂ.ಶಿವನಂಜಸ್ವಾಮಿ, ಜಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಸುಂದರಪ್ಪ ರವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಡಾ.ಬಗಾದಿ ಗೌತಮ್ ಮತ್ತು ಬಿ.ಆರ್.ಪೂರ್ಣಿಮಾ ರವರು ಗುಜರಾತಿನ ನೃತ್ಯ ಕಲಾವಿದರೊಂದಿಗೆ ನೃತ್ಯವನ್ನು ಮಾಡಿ ಗುಜರಾತಿನ ಕುಶಲಕರ್ಮಿಗಳನ್ನು ಹಾಗು ಗ್ರಾಹಕರನ್ನು ಮನರಂಜಿಸಿದರು.
ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ಶೀಟ್ಗಳು, ಟವಲ್ಗಳು, ಕುಶನ್ ಕವರ್ಗಳು, ಪರಿಸರ ಸ್ನೇಹಿಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ.