ಮೈಸೂರು: ಹೆಚ್.ಡಿ.ಕೋಟೆ ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಪರೂಪಕ್ಕೆ ದರ್ಶನ ನೀಡುತ್ತಿದ್ದ ಧೈತ್ಯಾಕಾರದ ಉದ್ದನೆಯ ದಂತದ ಕಬಿನಿ ರಾಜ ಎಂದೇ ಕರೆಯಲ್ಪಡುತ್ತಿದ್ದ ಭೋಗೇಶ್ವರ ಎಂಬ ಆನೆ ಸಾವನ್ನಪ್ಪಿದ್ದು ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಇದರ ಕಳೆಬರ ಪತ್ತೆಯಾಗಿದೆ.
ಅಂದಾಜು ಎಪ್ಪತ್ತು ವರ್ಷದ ಈ ಆನೆ ಉದ್ದದ ದಂತ, ಮೊರಗಲದ ಕಿವಿ ಮತ್ತು ಧೈತ್ಯಾಕಾರದ ದೇಹದಿಂದ ಗಮನಸೆಳೆಯುತ್ತಿತ್ತು. ಇದನ್ನು ಕಬಿನಿ ರಾಜ ಭೋಗೇಶ್ವರ ಎಂದೇ ಕರೆಯಲಾಗುತ್ತಿತ್ತು. ಜತೆಗೆ ಇದು ತನ್ನ ಪಾಡಿಗೆ ತಾನು ಎಂಬಂತೆ ಕಬಿನಿ ಹಿನ್ನೀರು ಪ್ರದೇಶಗಳಲ್ಲಿ ವಾಸಿಸುತ್ತಿತ್ತು. ಮೊದಲೆಲ್ಲ ಹಿಂಡಿನಲ್ಲಿ ಕಾಣಿಸುತ್ತಿತ್ತಾದರೂ ಇತ್ತೀಚೆಗಿನ ವರ್ಷಗಳಲ್ಲಿ ಏಕಾಂಕಿಯಾಗಿತ್ತು.
ಕಬಿನಿಗೆ ಬರುವ ಪ್ರವಾಸಿಗರು ತಮ್ಮ ಕ್ಯಾಮರಾಕ್ಕೆ ಭೋಗೇಶ್ವರ ಸಿಗುತ್ತಾನಾ ಎಂದು ಕುತೂಹಲದಿಂದ ಕಾಯುತ್ತಿದ್ದರು. ಇದರ ದಂತ ಅಂದಾಜು 4 ಅಡಿ ಇತ್ತಲ್ಲದೆ, ದೈತ್ಯ ದೇಹದೊಂದಿಗೆ ಹಣೆಭಾಗ ಅಗಲವಾಗಿ, ಕಿವಿಯು ಮೊರದಗಲವಿತ್ತು. ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗುವ ಇದರ ನಡಿಗೆ ಗಮನಸೆಳೆದಿತ್ತು.
ನಾಡಿಗೆ ಬಂದು ಉಪಟಳ ಮಾಡಿದ ನಿದರ್ಶನವಿರಲಿಲ್ಲ ಏಕಾಂಗಿಯಾಗಿ ಮೇವು ತಿನ್ನುತ್ತಾ, ನೀರು ಕುಡಿಯುತ್ತಾ ದಿನಗಳನ್ನು ಕಳೆಯುತ್ತಿತ್ತು. ಇದರ ಸಾವು ಪ್ರಾಣಿಪ್ರಿಯರಿಗೆ ಬೇಸರ ತಂದಿದ್ದಂತು ನಿಜ.