ಬೆಳ್ತಂಗಡಿ: ಗಿನ್ನಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನ ಟ್ರಸ್ಟ್ ಆಡಳಿತಕ್ಕೊಳಪಟ್ಟ ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ 28ನೇ ವರ್ಷದ ಜ್ಞಾನವಿಕಾಸ ಮತ್ತು ಜ್ಞಾನ ಪ್ರಕಾಶ (ಪುಷ್ಪ 49 ಮತ್ತು ಪುಷ್ಪ 50 )ಪ್ರಾಥಮಿಕ ಮತ್ತು ಪ್ರೌಢಶಾಲೆ 2022ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಹಾಗೂ 19ನೇ ವರ್ಷದ ರಾಜ್ಯಮಟ್ಟದ ಅಂಚೆ ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭ ಜುಲೈ 4 ಬೆಳಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದು, ಪ್ರಖ್ಯಾತ ಸಾಹಿತಿ, ನಟ, ನಿರ್ದೇಶಕ, ನಾಟಕಕಾರ, ಕಥೆಗಾರ, ಎಸ್. ಎನ್. ಸೇತುರಾಮ್ ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದಾರೆ. ಸಿನಿಮಾ ನಟ ಹಾಗೂ ಖ್ಯಾತ ಟಿವಿ ನಿರೂಪಕ ಮಾಸ್ಟರ್ ಆನಂದ್ ಅವರು ಅಂಚೆ ಕುಂಚ ವಿಜೇತರಿಗೆ ಪುರಸ್ಕರಿಸಲಿದ್ದಾರೆ.
ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಟ್ರಸ್ಟಿ ಡಾ. ಹೇಮಾವತಿ ವಿ. ಹೆಗ್ಗಡೆ ಹಾಗೂ ಟ್ರಸ್ಟಿ, ಡಿ ಹರ್ಷೇಂದ್ರ ಕುಮಾರ್ ಗೌರವ ಉಪಸ್ಥಿತರಿರುತ್ತಾರೆ.
ವಿಶೇಷವಾಗಿ ಕುಂಚಗಾನ ನೃತ್ಯ ವೈಭವ ನಡೆಯಲಿದ್ದು, ಉಡುಪಿಯ ವಿದುಷಿ ಸಂಗೀತ ಬಾಲಚಂದ್ರ ಅವರ ಗಾಯನ, ಬಂಟ್ವಾಳದ ಕಲಾವಿದ ಮುರಳಿಧರ ಆಚಾರ್ ಎನ್. ಅವರು ಕುಂಚದಲ್ಲಿ ಕಲೆಯನ್ನು ಅರಳಿಸಲಿದ್ದು ಹಾಗೂ ಪುತ್ತೂರು ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಮಣ್ಯ ಅವರು ನೃತ್ಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ “ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿಕ ಅಂಜನಿ ಕಶ್ಯಪ್ ನೊಂದಿಗೆ ಮಕ್ಕಳ ಸಂವಾದ ನಡೆಯಲಿದೆ ಎಂದು ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಹಾಗೂ ನಿರ್ದೇಶಕ ಶಶಿಕಾಂತ್ ಜೈನ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.