ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ನಡೆಯಿತು.
ಈ ವೇಳೆ ವಿಶ್ರಾಂತ ಪ್ರಾಧ್ಯಾಪಕರೂ ಖ್ಯಾತ ವಾಗ್ಮಿಗಳೂ ಆದ ಪ್ರೊ, ಎಂ. ಕೃಷ್ಣೇಗೌಡ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಚಟುವಟಿಕೆಯಷ್ಟೇ ಕಂಡು ಬರುತ್ತಿದೆ. ಬೌಧ್ಧಿಕ ಅಳತೆಯನ್ನು ಮೀರಿ ಕೌಶಲ್ಯ ಕೆಲಸ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬುದ್ಧಿ ಸಂಪನ್ಮೂಲ, ಭಾವಸಂಪನ್ಮೂಲ, ಭೌತಿಕ ಸಂಪನ್ಮೂಲ ಶಕ್ತಿಯಿದೆ. ಇವೆಲ್ಲವನ್ನೂ ತರಬೇತಿಗೊಳಿಸುವುದೇ ಕಲೆ ಮತ್ತು ಕ್ರೀಡೆ. ನಮ್ಮನ್ನು ನಾವು ತರಬೇತಿಗೆ ಒಳಪಡಿಸಿಕೊಳ್ಳುವುದೇ ಪರಿಪೂರ್ಣತೆ, ಪರಿಪೂರ್ಣತೆಯ ಕಡೆಗೆ ನಾವು ಸಾಗಬೇಕು ಎಂದು ಹೇಳಿದರು.
ಪ್ರಾಥಮಿಕ ನಡವಳಿಕೆಯನ್ನು ಅರಿತುಕೊಳ್ಳುವುದೇ ಸಂಸ್ಕಾರ. ವಿದ್ಯಾರ್ಥಿಗಳು ಬರಿ ಕಣ್ಣು ತೆರೆದರೆ ಸಾಲದು, ನೋಡುವುದನ್ನೂ ಕಲಿಯಬೇಕು. ಅಂದರೆ ದೃಷ್ಟಿಯೂ ಇರಬೇಕು. ವಿದ್ಯೆ ಮತ್ತು ಕೌಶಲ ಒಂದು ಯೋಗ. ಯೋಗವೆಂದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವುದು. ಆಗ ನಮ್ಮ ಬುಧ್ಧಿಯೂ ವಿಧೇಯ ವಿದ್ಯಾರ್ಥಿಯಾಗುತ್ತದೆ. ಜಗತ್ತು ಒಂದು ರೋಚಕ ಜ್ಞಾನ ಸಂಪತ್ತು. ಅದನ್ನು ನೋಡಿ, ಕೇಳಿ ಕಲಿಯಬೇಕು. ಸಾಧನೆ ಮಾಡದವರಿಗೆ ನೆಪಗಳಿರುತ್ತವೆ, ಸಾಧಕರಿಗಲ್ಲ ಎಂದು ಹೇಳಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ. ಆರ್. ಮೂಗೇಶಪ್ಪರವರು ಮಾತನಾಡಿ ಗುರುಪರಂಪರೆಯ ಈ ಸಂಸ್ಥೆ ತಮ್ಮೆಲ್ಲರನ್ನೂ ಗುರಿಯನ್ನು ತಲುಪುವಂತೆ ಮಾಡುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು. ಹಾಗೆಯೇ ಕೌಶಲ್ಯದೊಂದಿಗೆ ವಿದ್ಯಾರ್ಥಿಗಳಿಗೆ ಕನುಸುಗಳೂ ಇರಬೇಕು ಎಂದು ಹೇಳಿದರು.
ಕಾಲೇಜಿನ ಮುಖ್ಯಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ. ಸಾಂಬಶಿವಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಪಿ. ವಿಜಯೇಂದ್ರಕುಮಾರ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ. ಸಿ.ಆರ್. ಮಧುಸೂದನ್, ಕ್ರೀಡಾ ವೇದಿಕೆಯ ಸಂಚಾಲಕರಾದ ಎಂ. ಕಾರ್ತಿಕ್ ಉಪಸ್ಥಿತರಿದ್ದರು.