ಮೈಸೂರು: ನಗರದಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಸರಗಳ್ಳರನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಸರಗಳ್ಳರಿಂದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಒಟ್ಟು ಏಳು ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ರೂ. 13,50,000 ಮೌಲ್ಯದ 300 ಗ್ರಾಂ ತೂಕದ ಏಳು ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ದ್ವಿ ಚಕ್ರ ವಾಹನಗಳು ಮತ್ತು ಐದು ಮೊಬೈಲ್ ಫೋನ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದ ಸಂಬಂಧ ಕಾರ್ಯಾಚರಣೆಗಿಳಿದ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಶ್ರೀರಾಂಪುರ ರಿಂಗ್ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರ ಮೇಲೆ ಅನುಮಾನಗೊಂಡು ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ಇವರು ಈ ಹಿಂದೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಆ ನಂತರ ಕೂಲಂಕುಷವಾಗಿ ವಿಚಾರಣೆ ಮಾಡಿದ ವೇಳೆ ಈ ಇಬ್ಬರು ಆಸಾಮಿಗಳು ಇನ್ನಿಬ್ಬರೊಂದಿಗೆ ಸೇರಿ ಪ್ರತ್ಯೇಕವಾಗಿ ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡಿರುವುದು ಗೊತ್ತಾಗಿದೆ. ನಾಲ್ವರು ಸರಗಳ್ಳರು ಸೇರಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ 2, ಕುವೆಂಪುನಗರ-2, ಸರಸ್ವತಿಪುರಂ-1, ಲಕ್ಷ್ಮೀಪುರಂ-1, ವಿಜಯನಗರ -1 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಬಂಧಿತರಾದ ಸರಗಳ್ಳರ ಪೈಕಿ ಒಬ್ಬ ಪ್ರಮುಖ ಆರೋಪಿಯು ಈ ಹಿಂದೆ ವಿದ್ಯಾರಣ್ಯಪುರಂ, ಹೆಬ್ಬಾಳ್, ನರಸಿಂಹರಾಜ, ಮಂಡಿ ಪೊಲೀಸ್ ಠಾಣೆಗಳಲ್ಲಿ ವಂಚನೆ, ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಮೈಸೂರು ನಗರದ ಡಿ.ಸಿ.ಪಿ. ಗೀತರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎ.ಸಿ.ಪಿ. ಪೂರ್ಣಚಂದ್ರ ತೇಜಸ್ವಿ ರವರ ಮೇಲ್ವಿಚಾರಣೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿದ್ಯಾರಣ್ಯಪುರಂ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಜು ಜಿ.ಸಿ., ಪಿಎಸ್ಐ ಎನ್.ವಿ.ರಂಗಸ್ವಾಮಿ, ಸಿದ್ದಬಾಯಿ ಮಮದಪುರ್, ಎಎಸ್ಐ ಮರಿಸ್ವಾಮಿ ಸಿಬ್ಬಂದಿ ರಮೇಶ್, ಮಹೇಶ್ವರ, ನಟರಾಜು, ಶ್ರೀಧರಮೂರ್ತಿ ಕೆ, ರವಿ ಎಸ್, ಸುನಿಲ್ಕುಮಾರ್, ರಾಜೇಶ್, ರಂಜಿತ್ ಕುಮಾರ್, ನವೀನ್, ಧನಂಜಯ, ಕೃಷ್ಣರಾಜ ವಿಭಾಗದ ಎಸಿಪಿ ಸ್ಕ್ವಾಡ್ನ ನಾರಾಯಣಶೆಟ್ಟಿ, ಶ್ರೀನಿವಾಸ್, ವೆಂಕಟೇಶ್, ಸುರೇಶ್, ಮೇಘನಾಯಕ್, ಸೋಮಶೇಖರ್ನಾಯಕ್, ಭಾಗವಹಿಸಿದ್ದರು.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ರವರು ಪ್ರಶಂಸಿಸಿರುತ್ತಾರೆ.