ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಒಂದು ವಾರಗಳ ಕಾಲ ಆಯೋಜಿಸಿರುವ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಗಂಡುಕಲೆ ಕುಸ್ತಿ ಪರಂಪರೆ ವಿಜೃಂಭಿಸಲಿದ್ದು, ದಸರಾ ನಾಡಕುಸ್ತಿ, ಪಂಜ ಕುಸ್ತಿ ಮತ್ತು ಪಾಯಿಂಟ್ ಕುಸ್ತಿಗಳು ಅ.15ರಿಂದ 21ರವರೆಗೆ ನಡೆಯಲಿವೆ.
ಈ ಕುರಿತು ದಸರಾ ಕುಸ್ತಿ ಉಪ ಸಮಿತಿ ಉಪ ವಿಶೇಷ ಅಧಿಕಾರಿ, ಅಪರ ಪೊಲೀಸ್ ಅಧೀಕ್ಷಕಿ ಬಿ.ಎಂ.ನಂದಿನಿ ಮಾಹಿತಿ ನೀಡಿದ್ದು, ಈ ಬಾರಿ ಐದು ಟೈಟಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ವಿಶೇಷವಾಗಿ ದಸರಾ ಕಿಶೋರ್ ಹಾಗೂ ದಸರಾ ಕಿಶೋರಿ ಎರಡು ಪ್ರಶಸ್ತಿಗಳ ಕುಸ್ತಿಗಳನ್ನು ಆಡಿಸಲಾಗುತ್ತಿದೆ. ಮಹಿಳಾ ಕುಸ್ತಿ ಪಟುಗಳಿಗೆ ದಸರಾ ಕಿಶೋರಿ ಸ್ಪರ್ಧೆ, 57 ಕೆ.ಜಿ.ಯಿಂದ 65 ಕೆ.ಜಿ. ವಿಭಾಗದಲ್ಲಿ ದಸರಾ ಕಿಶೋರ್ ಪ್ರಶಸ್ತಿ ಕುಸ್ತಿ ನಡೆಯಲಿದೆ.
ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಭಾಗದಲ್ಲಿ ಮೈಸೂರು ದಸರಾ ಕುಮಾರ(74 ಕೆ.ಜಿ ಮೇಲ್ಪಟ್ಟು) ಪ್ರಶಸ್ತಿ ನೀಡಲಾಗುತ್ತದೆ. ಉಳಿದಂತೆ ದಸರಾ ಕಂಠೀರವ (86 ಕೆ.ಜಿ ಮೇಲ್ಪಟ್ಟು), ದಸರಾ ಕೇಸರಿ (74 ರಿಂದ 86 ಕೆ.ಜಿ ವರೆಗೆ) ಕುಸ್ತಿಗಳು ನಡೆಯಲಿವೆ. ನಾಡ ಕುಸ್ತಿ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಪೆಷಲ್ ಕುಸ್ತಿ, ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ, ರಾಜ್ಯ ಮಟ್ಟದ ಪುರುಷರ ಫ್ರೀ ಸ್ಪೆಷಲ್ ಕುಸ್ತಿಗಳು ನಡೆಯಲಿವೆ. ದಸರಾ ಕಂಠೀರವ, ದಸರಾ ಕೇಸರಿ, ಮೈಸೂರು ದಸರಾ ಕುಮಾರ್, ದಸರಾ ಕಿಶೋರಿ ಮತ್ತು ದಸರಾ ಕಿಶೋರ್ ಪ್ರಶಸ್ತಿಗಳಿಗೆ ಕ್ರಮವಾಗಿ 1.25 ಕೆ.ಜಿ, 1 ಕೆ.ಜಿ, 0.75 ಕೆ.ಜಿ., 0.50 ಕೆ.ಜಿ. ಮತ್ತು 0.50 ಕೆ.ಜಿ ತೂಕದ ಬೆಳ್ಳಿ ಗದೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಅ.18ರಂದು ಪಂಜಕುಸ್ತಿ ನಡೆಯಲಿದೆ. ಮಹಿಳೆಯರು, ಪುರುಷರು ಮತ್ತು ವಿಶೇಷಚೇತನರ ವಿಭಾಗದಲ್ಲಿ ಕುಸ್ತಿಗಳು ನಡೆಯಲಿವೆ. ಇವರಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅ.15ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು. ಕುಸ್ತಿ ಉದ್ಘಾಟನೆ ದಿನ ದೆಹಲಿ, ಮಹಾರಾಷ್ಟ್ರ, ಹರಿಯಾಣದ ಪೈಲ್ವಾನರ 1 ಗಂಟೆ ವಿಶೇಷ ಕುಸ್ತಿ ಇರಲಿದೆ ಎಂದು ಮಾಹಿತಿ ನೀಡಿದರು.
ಪ್ರತಿ ದಿನ ಸಂಜೆ 4 ಗಂಟೆಗೆ ನಾಡಕುಸ್ತಿ ಆರಂಭವಾಗಲಿದೆ. ನಿತ್ಯ 30 ಜೋಡಿಗಳು ಬಲಾಬಲ ಪ್ರದರ್ಶಿಸಲಿವೆ. ವಿಜೇತರಿಗೆ ಮೇಯರ್ ಕಪ್, ಸಾಹುಕಾರ್ ಚೆನ್ನಯ್ಯ ಕಪ್, ಮೈಸೂರು ಒಡೆಯರ್ ಕಪ್ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಲಾಗುತ್ತಿದೆ ಎಂದು ಹೇಳಿದರು.
ದಸರಾ ಕುಸ್ತಿ ಸಮಿತಿ ಕಾರ್ಯಾಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಗೋವಿಂದರಾಜು ಸುದ್ದಿಗೋಷ್ಠಿಯಲ್ಲಿದ್ದರು.