ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯ ರೂವಾರಿಗಳಾದ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮು ಮುಂದುವರೆದಿದ್ದು, ಕ್ಯಾಪ್ಟನ್ ಅಭಿಮನ್ಯು ನಂತರ ಗುರುವಾರ ಧನಂಜಯ ಆನೆ ಯಶಸ್ವಿಯಾಗಿ ತಾಲೀಮು ನಡೆಸಿದ್ದು, ಗಜಪಡೆ ಸರ್ವ ರೀತಿಯಲ್ಲಿ ಸನ್ನದ್ಧವಾಗುತ್ತಿವೆ.
ಮೊದಲ ದಿನ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ಹಾಗೂ ಎರಡನೇ ದಿನ ಮಹೇಂದ್ರ ಆನೆ ಯಶಸ್ವಿಯಾಗಿ ಮರದ ಅಂಬಾರಿ ಹೊರುವ ತಾಲೀಮು ನಡೆಸಿದ್ದವು. ಗುರುವಾರ ಧನಂಜಯ ಆನೆ 280 ಕೆ.ಜಿ. ತೂಕದ ಮರದ ಅಂಬಾರಿ, 400 ಕೆ.ಜಿ. ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 1000 ಕೆ.ಜಿ.ಗೂ ಅಧಿಕ ಭಾರ ಹೊರುವ ಮೂಲಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ) ಯಶಸ್ವಿಯಾಗಿ ಹೆಜ್ಜೆ ಹಾಕಿದ್ದಾನೆ.
ಬೆಳಗ್ಗೆ 8.15ಕ್ಕೆ ಅರಮನೆ ಆವರಣ ಬಿಟ್ಟ ಧನಂಜಯ 9.30ರ ವೇಳೆಗೆ ಬನ್ನಿಮಂಟಪ ತಲುಪಿದ್ದಾನೆ. ಧನಂಜಯ ಮರದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಮುಂದೆ ನಡೆದರೆ, ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯಾ ಸಾಗಿದವು. ಅಭಿಮನ್ಯು, ಅರ್ಜುನ, ಕಂಜನ್, ಭೀಮ, ಗೋಪಿ, ಧನಂಜಯ, ಮಹೇಂದ್ರ ಸೇರಿದಂತೆ ಎರಡನೇ ತಂಡದ ಪ್ರಶಾಂತ, ಸುಗ್ರೀವ ಹಾಗೂ ಲಕ್ಷ್ಮೀ ಆನೆಗಳು ತಾಲೀಮಿನಲ್ಲಿ ಹೆಜ್ಜೆ ಹಾಕಿದವು. ಆದರೆ, ಹೊಸ ಆನೆಗಳಾದ ರೋಹಿತ್, ಹಿರಣ್ಯಾ ತಾಲೀಮಿನಲ್ಲಿ ಭಾಗಿಯಾಗಿರಲಿಲ್ಲ.
ರಾಜಪಥದಲ್ಲಿದ್ದ ನೂರಾರು ಜನ ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು. ಮರದ ಅಂಬಾರಿ ಹೊತ್ತು ಸಾಗುತ್ತಿದ್ದ ಧನಂಜಯ ಹಾಗೂ ಆತನ ಹಿಂದೆ ಸಾಗುತ್ತಿದ್ದ ಗಜಪಡೆಯ ಚಿತ್ರಗಳನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದರು. ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಕ್ಕೂ ಮೊದಲು ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಮಹೇಂದ್ರನ ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು.