ಮೈಸೂರು: ನಮ್ಮ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಮಕ್ಕಳು ಒಳಗೊಂಡಂತೆ ಕಾರ್ಮಿಕ ಕುಟುಂಬಗಳಿಗಾಗಿಯೇ ಅನೇಕ ಯೋಜನೆಗಳಿದ್ದು ಇದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಬದುಕನ್ನು ಸುಧಾರಿಸಿಕೊಳ್ಳಬೇಕೆಂದು ಮೈಸೂರು ವಿಭಾಗದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ನಾಜಿಯಾ ಸುಲ್ತಾನ ಅವರು ಕಾರ್ಮಿಕ ವರ್ಗಕ್ಕೆ ಸಲಹೆ ನೀಡಿದರು.
ನಗರದ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಹಾಗೂ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಮಾತನಾಡಿದ ಅವರು ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯದೆ ಚೆನ್ನಾಗಿ ಓದಿ ಒಳ್ಳೆ ಶಿಕ್ಷಣಗಳಿಸಿ ತಮ್ಮ ಸ್ವಸಕ್ತಿಯಿಂದಲೇ ಉನ್ನತ ಹುದ್ದೆಗಳನ್ನು ಅಲಂಕರಿಸುವುದರ ಜೊತೆಗೆ ಮಾಲೀಕರೂ ಆಗಬೇಕೆಂದರು.
ಯದ ಯದಾ ಹಿಧರ್ಮಸ್ಯ ಗ್ಲಾನಿರ್ಭವತಿ ಭಾರತ,ಅಭ್ಯುತ್ತಾನ ಮ ಧರ್ಮಸ್ಯ ತದಾ ತ್ಮಾನಂ ಸೃಜಾಮ್ಯಹಮ್, ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಸ್ಕೃತಾಮ್,ಧರ್ಮ ಸಂಸ್ಥಾಪನಾರ್ಥಾಯಸಂಭವಾಮಿ ಯುಗೇ ಯುಗೇ ಅಂತ ಹೇಳಿ ಯಾವಾಗ ಧರ್ಮಕ್ಕೆ ಅಪಾಯ ಉಂಟಾಗುವುದೋ,ಯಾವಾಗ ಅಧರ್ಮವು ತಲೆಯೆತ್ತಿ ಮೆರೆಯುವುದೋ ಆಗ ನಾನು ಒಳ್ಳೆಯವರನ್ನು ರಕ್ಷಿಸಲು ಮತ್ತು ಕೆಟ್ಟವರನ್ನ ನಾಮಾಡಲು ಅವತರಿಸಿ ಬರುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಅಂದು ಭಗವದ್ಗೀತೆಯಲ್ಲಿ ಹೇಳಿದ್ದ.
ಆಗ ಅಂಥ ಶ್ರೀ ಕೃಷ್ಣ ಪರಮಾತ್ಮರು ಇದ್ದರು.ಆದರೆ ಇದು ಕಲಿಗಾಲ.ಸಮಸ್ಯೆಗಳು ಬಂದರೆ, ಕಷ್ಟವೆಂದರೆನಮ್ಮನ್ನು ರಕ್ಷಿಸಲು ಯಾವ ಶ್ರೀ ಕೃಷ್ಣ ಪರಮಾತ್ಮರೂ ಈಗ ಬರುವುದಿಲ್ಲ. ಆದ್ದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಮಗೆ ನಾವೇ ಶ್ರೀ ಕೃಷ್ಣ ಪರಮಾತ್ಮರಾಗಬೇಕು. ಹಾಗಾಗಿ ಯಾರೂ ಕೂಡ ಶಿಕ್ಷಣದಿಂದ ದೂರ ಉಳಿಯದೆ ವಿದ್ಯೆ ಎಂಬ ಅಸ್ತ್ರದಿಂದ ರಕ್ಷಣಾತ್ಮಕವಾದ ಸುಂದರ ಭವಿಷ್ಯವನ್ನುರೂಪಿಸಿಕೊಳ್ಳಬೇಕು.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,ಇದಿರ ಅಳಿಯಲು ಬೇಡ ಎಂಬ 12ನೇ ಶತಮಾನದ ವಚನ ಕ್ರಾಂತಿ ಪುರುಷ ಮಹಾನ್ ಮಾನವತಾವಾದಿ ಬಸವಣ್ಣನವರ ಸಪ್ತ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾನವೀಯ ಸಮಾಜವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಭಾಗಿಗಳಾಗೋಣ ಎಂದು ತಿಳಿಸಿದರು.
ಸಮಸ್ತ ಕನ್ನಡಿಗರ ತಾಯಿ ಶ್ರೀ ಭುವನೇಶ್ವರಿ,ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಯಂತ್ರರ್ಷಿ ವಿಶ್ವೇಶ್ವರಯ್ಯ ಅವರುಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮೇಯರ್ ಶಿವಕುಮಾರ್ ಅವರು, ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರು ದೇಶ ಕಂಡ ಮಹಾನ್ ಸಾಧಕ ಚೇತನರು. ಅದರಲ್ಲೂ ವಿಶೇಷವಾಗಿ ನಮ್ಮ ಮೈಸೂರಿನ ಅಭಿವೃದ್ಧಿಗೆ ಇವರುಗಳ ಕೊಡುಗೆ ಬಹಳ ದೊಡ್ಡದೆಂದು ಹೇಳಿ ಇವರನ್ನು ಸ್ಮರಿಸಿ ಇಂತಹ ಒಳ್ಳೆಯ ಸೇವಾ ಕಾರ್ಯಕ್ರಮವನ್ನು ರೂಪಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯವಾಗಿದ್ದು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಇದೇ ವೇಳೆ ಕಾರ್ಮಿಕರ ಮಕ್ಕಳಾದ 25ಕ್ಕೂ ಹೆಚ್ಚುಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾಪುರಸ್ಕಾರ ನೀಡಿ ವೇದಿಕೆಯಲ್ಲಿ ಗೌರವಿಸಿದರು.ಸಂಘದ ಅಧ್ಯಕ್ಷ ಮಹೇಶ್ಎಸ್. ಜಯನಗರ ಅವರು ಅಧ್ಯಕ್ಷತೆ ವಹಿಸಿದ್ದರು. ಕೊಹಿನೂರ್ ಹಾರ್ಡ್ವೇರ್ ನ ಪ್ರವೇಶ್ ವಿಕಾಶ್, ಸನ್ ಜೋನ್ನ್ ಸೋಲಾರ್ ಸಿಸ್ಟಮ್ ನ ಎಸ್.ಟಿ.ದೇವೇಂದ್ರಪ್ಪ, ಕದಂ ಎಂಟರ್ ಪ್ರೈಸಸ್ ನ ಚೇತನ್ ಕದಂ, ಸಂಜೂನ್ ಸೋಲಾರ್ ಸಿಸ್ಟಂನ ಟಿ.ಎಂ.ಶ್ರೇಯಾಂಕ್,ಎಂಆರ್ಎಂ ಪೈಪ್ ಸಂಸ್ಥೆಯ ಮಹಾಂತೇಶ್, ಆಂತರಿಕ ಲೆಕ್ಕಪರಿಶೋಧಕ ಡಿ.ಜಲೇಂದ್ರ, ಕಾನೂನು ಸಲಹೆಗಾರ ಎನ್. ಸುಂದರರಾಜ್, ಉಪಾಧ್ಯಕ್ಷ ಎಂ.ಎಸ್. ಸುರೇಶ್ ಕುಮಾರ್, ಕಾರ್ಯದರ್ಶಿಗಳಾದ ಕಾಳೇಗೌಡ, ಪಳನಿ ಸ್ವಾಮಿ, ಖಜಾಂಚಿ ಎಂ.ರವಿಕುಮಾರ್, ನಿರ್ದೇಶಕರುಗಳಾದ ಅನಿಲ್ ಕುಮಾರ್, ಏಜಾಜ್ ಪಾಶ, ಕುಮಾರ್,ಚಂದ್ರೇಗೌಡ, ಸಿ.ತಿಮ್ಮರಾಜು,ಎಂ.ಪ್ರಕಾಶ್,ಯೋಗೇಶ್, ಎಂ.ಲಕ್ಷ್ಮಣ್,ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕುಮಾರಿ ವರ್ಷ ಸ್ವಾಗತ ಗೀತನೃತ್ಯ ಮಾಡಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಂಘದ ನಿರ್ದೇಶಕ ಚಂದ್ರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.