ಎಚ್.ಡಿ.ಕೋಟೆ: ಮೇಟಿಕುಪ್ಪೆ ವನ್ಯಜೀವಿ ವಲಯಕ್ಕೆ ಸೇರಿದ ಕಾಡಾನೆಯೊಂದು ಕಾಡಂಚಿನ ಗ್ರಾಮ ಬೂದನೂರು ಗ್ರಾಮಕ್ಕೆ ಬೆಳ್ಳಂ ಬೆಳಿಗ್ಗೆಯೇ ಎಂಟ್ರಿ ಕೊಟ್ಟು ಗ್ರಾಮದ ಜನರಲ್ಲಿ ಆತಂಕ ಮೂಡಿಸಿತ್ತು. ಆದರೆ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಕಾಡಾನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ದಿಢೀರ್ ಗ್ರಾಮಕ್ಕೆ ನುಗ್ಗಿದ ಕಾಡಾನೆಯನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಕೂಗಾಡುತ್ತಾ ಓಡಿದರಾದರೂ ಆದರೆ ಯಾವುದೇ ಹಾನಿ ಮಾಡದೆ ಗ್ರಾಮದಲ್ಲಿ ಅಡ್ಡಾಡಿದ ಕಾಡಾನೆಯನ್ನು ಕೊನೆಗೂ ಕಾಡಿಗೆ ಅಟ್ಟಲಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮ ಕಾಡಂಚಿನ ಗ್ರಾಮವಾಗಿದ್ದು ಕೂಗಳತೆ ದೂರದಲ್ಲೇ ಮೇಟಿಕುಪ್ಪೆ ವನ್ಯಜೀವಿ ವಲಯಕ್ಕೆ ಸೇರಿದ ಬೃಹತ್ ಕಾಡಿದ್ದರೂ, ಇದುವರೆಗೆ ಗ್ರಾಮದ ಇತಿಹಾಸದಲ್ಲೇ ಎಂದೂ ಬೆಳಗ್ಗಿನ ಜಾವ ಕಾಡಾನೆ ಕಾಣಿಸಿಕೊಂಡಿರಲಿಲ್ಲ, ಆದರೆ ಸೆ.19ರಂದು ಬೆಳಿಗ್ಗೆಯೇ ಕಾಡಾನೆ ಗ್ರಾಮದೊಳಗೆ ಕಂಡು ಬಂದಿರುವು ಗ್ರಾಮಸ್ಥರು ಬೆಚ್ಚಿ ಬೀಳುವಂತೆ ಮಾಡಿತ್ತು.
ಕಾಡಾನೆಯನ್ನು ಕಂಡ ಗ್ರಾಮದ ಯುವಕರು ಅದನ್ನು ಹಿಂಬಾಲಿಸಿ ಬೆದರಿಸಿ ಓಡಿಸುವ ಪ್ರಯತ್ನ ಮಾಡಿದರು. ಜನರನ್ನು ಕಂಡು ಗಾಬರಿಗೊಂಡ ಕಾಡಾನೆ ಕೆಲ ಹೊತ್ತು ಗ್ರಾಮದ ಬೀದಿಗಳಲ್ಲೇ ಅಡ್ಡಾಡಿತು. ಈ ವೇಳೆ ಗ್ರಾಮದ ಮುಖಂಡ ಬೂದನೂರು ಮಹದೇವ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದರು.
ಅಷ್ಟರಲ್ಲಿಯೇ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರಿಂದ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಆಗಮಿಸಿದ ಮೇಟಿಕುಪ್ಪೆ ವನ್ಯಜೀವಿ ವಲಯದ ಆರ್ಎಫ್ಒ ನಾರಾಯಣನಾಯ್ಕ ಅವರು ಗ್ರಾಮದ ಜನರನ್ನು ಚದುರಿಸಿ ಒಂಟಿ ಸಲಗನಿಗೆ ಯಾವುದೇ ತೊಂದರೆಯಾಗದಂತೆ ಕಾಡಿಗೆ ಅಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಆರ್ಎಫ್ಒ ನಾರಾಯಣನಾಯ್ಕರವರು ಕಾಡಾನೆಗಳು ಕಾಡಿನಿಂದ ಹೊರ ಬಾರದಂತೆ ದೊಡ್ಡ ಪ್ರಮಾಣದ ಟ್ರಂಚ್ ನಿರ್ಮಾಣ ಮಾಡಿ, ಹೆಚ್ಚಿನ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ, ಅದರೂ ಆಕಸ್ಮಿಕವಾಗಿ ಬೂದನೂರು ಗ್ರಾಮಕ್ಕೆ ಕಾಡಾನೆ ಬಂದಿದೆ. ಗ್ರಾಮದ ಜನರಲ್ಲಿ ಯಾವುದೇ ಭಯ ಬೇಡ ಇನ್ನು ಮುಂದೆ ಗಸ್ತು ಹೆಚ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಕ್ಕೆ ಕಾಡಾನೆ ಬಂದಿದ್ದ ವಿಚಾರ ತಿಳಿದು ಆತಂಕಗೊಂಡಿದ್ದ ಗ್ರಾಮಸ್ಥರು ಕಾಡಾನೆಯನ್ನು ಮರಳಿ ಕಾಡಿಗೆ ಅಟ್ಟಿದ್ದರಿಂದ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.