ಕಾರವಾರ: ಪ್ರವಾಹ ಪೀಡಿತರಿಗಾಗಿ ಹಿಂದೆ ರೂಪಿಸಿದ ಯೋಜನೆಗಳು ಜಾರಿಯಾಗದೆ ಇರುವುದನ್ನು ಪ್ರಸ್ತಾಪಿಸಿದ ಶಾಸಕಿ ರೂಪಾಲಿ ಎಸ್.ನಾಯ್ಕ, ಸರ್ಕಾರ ಬದಲಾಗುತ್ತಿದ್ದಂತೆ ಯೋಜನೆಗಳೂ ನೆನೆಗುದಿಗೆ ಬೀಳುತ್ತಿರುವ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ಗಮನ ಸೆಳೆದರು.
ಪ್ರವಾಹದ ಕುರಿತು ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ, ಒಂದು ಸರ್ಕಾರ ಜನಪರವಾದ ಯೋಜನೆಯನ್ನು ಘೋಷಣೆ ಮಾಡುತ್ತದೆ. ನಂತರ ಬೇರೆ ಸರ್ಕಾರ ಬಂದಾಗ ಹಿಂದಿದ್ದ ಅಧಿಕಾರಿಗಳೂ ಬದಲಾಗುತ್ತಾರೆ. ಇದರಿಂದ ಯೋಜನೆ ಜಾರಿಯಾಗುವುದೇ ಇಲ್ಲ ಎಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು.
2005ರಿಂದ 2010ರ ತನಕ ನಾನು ತಾಲ್ಲೂಕು ಪಂಚಾಯತ್ ಅಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪ್ರವಾಹ ಸಂತ್ರಸ್ಥರಿಗಾಗಿ ನಮ್ಮ ಭೂಮಿ, ನಮ್ಮ ತೋಟ ಯೋಜನೆಯನ್ನು ಘೋಷಣೆ ಮಾಡಿದರು.ಇದರಲ್ಲಿ ಅರ್ಧ ಗುಂಟೆ ಮನೆ ನಿರ್ಮಾಣಕ್ಕೆ,ಇನ್ನರ್ಧ ಗುಂಟೆ ತೋಟಕ್ಕಾಗಿ ಮೀಸಲಿಡುವ ಉದ್ದೇಶ ಇತ್ತು.
ಯೋಜನೆ ಜಾರಿಯಾಗುವ ಮುನ್ನವೇ ಬೇರೆ ಸರ್ಕಾರ ಬಂತು. ಅಧಿಕಾರಿಗಳೂ ಬದಲಾದರು. ಆ ಯೋಜನೆ ಇದುವರೆಗೂ ಜಾರಿಯಾಗಲೇ ಇಲ್ಲ. ಸರ್ಕಾರ ಬದಲಾದಂತೆ ಅಧಿಕಾರಿಗಳೂ ಬದಲಾಗಬಾರದು. ಯೋಜನೆಗಳು ನೆನೆಗುದಿಗೆ ಬೀಳಬಾರದು ದಯವಿಟ್ಟು ಈ ಬಗ್ಗೆ ಗಮನ ಹರಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.
ಈ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎದ್ದು ನಿಂತು ಘೋಷಣೆಗಳಾದರೆ ಸಾಲದು. ಅದು ಜಾರಿಯಲ್ಲಿ ಬರಬೇಕು ಎನ್ನುತ್ತಿದ್ದಂತೆ ರೂಪಾಲಿ ನಾಯ್ಕ, ಕ್ಷಮಿಸಿ ಸರ್ ನಾನು ತಮ್ಮ ಬಗ್ಗೆ ಮಾತನಾಡುತ್ತಿಲ್ಲ. 2018ರಿಂದ ಪ್ರವಾಹದಿಂದ ಜನರು ತೊಂದರೆಗೊಳಗಾಗಿದ್ದಾರೆ.
ಅಧಿಕಾರಿಗಳಿಂದ ಕೆಲಸ ಆಗಬೇಕು. ಸಂತ್ರಸ್ಥರಿಗೆ ನ್ಯಾಯ ಸಿಗಬೇಕು ಎನ್ನುವುದನ್ನು ಹೇಳುತ್ತಿದ್ದೇನೆ ಎಂದರು. ಸರ್ಕಾರದ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕೆಂದು ಉಪಯುಕ್ತ ಸಲಹೆ ನೀಡಿದರು.