ಮೈಸೂರು: ರಾಜಕೀಯವಾಗಿ ನನಗೆ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವುದು ನನ್ನ ಕೊನೆಯ ಆಸೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾವುಕವಾಗಿ ನುಡಿದಿದ್ದಾರೆ.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮತಿ ವತಿಯಿಂದ ಕೇರ್ಗಳ್ಳಿಯಲ್ಲಿ ಆಯೋಜಿಸದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ದೃಷ್ಟಿಯಿಂದ ಈ ಚುನಾವಣೆ ಬಹಳ ಮುಖ್ಯ. ಹಾಗಾಗಿ ಯಾರು ಕೂಡ ಲಘುವಾಗಿ ಪರಿಗಿಣಸದೆ ಪ್ರತಿಯೊಬ್ಬ ಕಾರ್ಯರ್ತನೂ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಮಾವಿನಹಳ್ಳಿ ಸಿದ್ದೇಗೌಡ ಒಬ್ಬ ಅಭರ್ಥಿ ಮಾತ್ರ. ನಾನೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಭಾವಿಸಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಬಂಡಾಯ ಸಾರಿದ ಎಲ್ಲರನ್ನೂ ಕೂರಿಸಿ ಈಗಾಗಲೆ ಸಭೆ ಮಾಡಿದ್ದೇನೆ. 11 ಜನ ಮುಂಖಡರ ಒಮ್ಮತದ ಮೇರೆಗೆ ಮಾವಿನಹಳ್ಳಿ ಸಿದ್ದೇಗೌಡಗೆ ಟಿಕೆಟ್ ನೀಡಿದ್ದೇವೆ. ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಬದಿಗೊತ್ತಿ ಸಿದ್ದೇಗೌಡರನ್ನು ನಿಮ್ಮ ಸಹೋದರ ಎಂದು ಭಾವಿಸಿ ಈ ಬಾರಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಸಿದ್ದೇಗೌಡ, ಮರಿಗೌಡರ ಮುಖ ನೋಡದೆ ಸಿದ್ದರಾಮಯ್ಯನ ಮುಖನೋಡಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಮನವಿ ಮಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮುಂಡೇಶ್ವರಿ ಕ್ಷೇತವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಅಲ್ಲದೇ ಕಳೆದ ಬಾರಿ ಇಲ್ಲಿಂದಲೇ ಸ್ಪರ್ಧೆ ಮಾಡಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದಿದ್ದೆ. ಆದರೆ, ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಜಿ.ಟಿ.ದೇವೆಗೌಡರನ್ನು ಗೆಲ್ಲಿಸಿದರು. ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳೂ ನನ್ನನ್ನೇ ಟಾರ್ಗೆಟ್ ಮಾಡುತ್ತಿವೆ. ಸಿದ್ದರಾಮಯ್ಯನನ್ನು ಮುಗಿಸಬೇಕು ಎಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ, ರಾಜ್ಯದ ಜನರ ಆಶೀರ್ವಾದ ಇರುವವೆರಗೂ ಯಾರು ಏನು ಮಾಡಲು ಸಾಧವಿಲ್ಲ ಎಂದರು.
ಜೆಡಿಎಸ್ ಎಷ್ಟೇ ಪಂಚರತ್ನ ಯಾತ್ರೆ ಮಾಡಿದರೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಸಾಧವಿಲ್ಲ . ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಸ್ಥಾನ ಕಳೆದುಕೊಳ್ಳಲಿದೆ. ಹಳೆ ಮೈಸೂರು ಭಾಗ ಬಿಟ್ಟರೆ ಆ ಪಕ್ಷಕ್ಕೆ ಮತ್ತೆಲ್ಲೂ ಸ್ಥಳವಿಲ್ಲ ಎಂದು ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಅಭರ್ಥಿ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ಯಾವುದೇ ಬೇಡಿಕೆ ಇಲ್ಲದೇ ಕ್ಷೇತ್ರದ ಹಾಲಿ ಶಾಸಕರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಈ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಗೆಲುವನ್ನು ಕಣ್ತುಂಬಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧಕ್ಷ ಕೆ.ಮರಿಗೌಡ, ಕೆಪಿಸಿಸಿ ಮಹಿಳಾ ಘಟಕದ ಅಧಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಕೆಪಿಸಿಸಿ ಸದಸ್ಯ ನರಸಯ್ಯ, ಮುಖಂಡರಾದ ಶಿವಣ್ಣ, ರಾಕೇಶ್ ಪಾಪಣ್ಣ, ಬೀರಿಹುಂಡಿ ಬಸವಣ್ಣ, ಯರಗನಹಳ್ಳಿ ಮಹದೇವ, ಟಿ.ಬಿ.ಲತಾ ಚಿಕ್ಕಣ್ಣ, ಮೋದಾಮಣಿ, ಸುಶೀಲಾ ನಂಜಪ್ಪ ಇದ್ದರು.