ಮೈಸೂರು: ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ತಮ್ಮ ತಂದೆ ಆರ್.ಧ್ರುವನಾರಾಯಣ್ ಅವರನ್ನು ಕಳೆದುಕೊಂಡ ನೋವಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಮೊದಲೇ ನೋವಿನಲ್ಲಿದ್ದ ದರ್ಶನ್ ಗೆ ತಾಯಿ ವೀಣಾ ತೀರಿಕೊಂಡಿರುವುದು ಬರಸಿಡಿಲಿನಂತೆ ಎರಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಜೆಡಿಎಸ್ ನಿರ್ಧರಿಸಿದೆ. ಈ ಬಗ್ಗೆ ಜೆಡಿಎಸ್ ನಾಯಕರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಧ್ರುವನಾರಾಯಣ್ ಅವರ ಇಬ್ಬರು ಮಕ್ಕಳು ಲವ ಮತ್ತು ಕುಶರಂತೆ ಕಾಣುತ್ತಾರೆ. ಅವರಿಗೆ ತಂದೆಯನ್ನು ಕಳೆದುಕೊಂಡ ನೋವು ಇನ್ನೂ ಇದೆ. ತಾಯಿ ಕೂಡ ನಿಧನರಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಪರ್ಧೆ ಮಾಡಬೇಕೇ ಬೇಡವೇ ಎಂಬುದನ್ನು ಚರ್ಚಿಸುತ್ತಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿ, ತಂದೆಯ ನಿಧನದ ನಂತರ ಧ್ರುವನಾರಾಯಣ್ ಅವರ ಪುತ್ರನಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನ ಶಾಸಕರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ. ತಂದೆ ಕಳೆದುಕೊಂಡ ದುಃಖದಲ್ಲಿರುವ ದರ್ಶನ್ ಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆಯಿತು. ಈಗ ದರ್ಶನ್ ಅವರ ತಾಯಿ ಕೂಡ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಖಂಡಿತವಾಗಿಯೂ ಬೆಂಬಲ ನೀಡಲಿದ್ದಾರೆ ಎಂದು ತಿಳಿಸದ್ದಾರೆ. ಅಲ್ಲದೆ ದರ್ಶನ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬೆಂಬಲ ಘೋಷಿಸುವುದಾಗಿ ಸ್ವತಃ ಕುಮಾರಸ್ವಾಮಿ ತಿಳಿಸಿರುವುದನ್ನು ಗಮನಿಸಬಹುದು.