ಔರಾದ: ಶೋಷಿತ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಇಂದಿನ ಜೀವನಕ್ಕೆ ಪ್ರಸ್ತುತವಾಗಿವೆ ಎಂದು ತಾಲ್ಲೂಕು ಯೋಜನಾಧಿಕಾರಿ ರತಿಕಾಂತ್ ನೆಳೆಗೆ ಹೇಳಿದರು.
ತಾಲ್ಲೂಕಿನ ವಡಗಾಂವ ದೇ ಗ್ರಾಮದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು 18 ವರ್ಷ ಮೇಲ್ಪಟ್ಟ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಮತ ಅತ್ಯಂತ ಅಮೂಲ್ಯವಾಗಿದೆ ಎಂದು ಮತದಾನ ಕುರಿತು ಜಾಗೃತಿ ಮೂಡಿಸಿದರು. ಅಂಬೇಡ್ಕರ್ ಅವರು ಅಸಮಾನತೆಯ ವಿರುದ್ಧ ಹೋರಾಡಿದರು. ಶೋಷಿತರ ಪರವಾದ ಸಂವಿಧಾನ ರಚಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದರು ಎಂದು ತಿಳಿಸಿದರು.
ಪಿಡಿಒ ವಿನೋದ್ ಕುಮಾರ್ ಕುಲಕರ್ಣಿ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದರು. ಬೌದ್ಧ ಧರ್ಮದ ತತ್ವ, ಸಿದ್ಧಾಂತ ತಿಳಿದು ಬೌದ್ಧ ಧರ್ಮ ಸ್ವೀಕರಿಸಿದರು. ಅವರ ಅನುಯಾಯಿಗಳು ಬೌದ್ಧ ಧರ್ಮದ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಒ ವಿನೋದ್ ಕುಲಕರ್ಣಿ, ಸುಭಾಷ್ ಗ್ರಾಮ ಪಂಚಾಯತ್ ಸದಸ್ಯರಾದ ರಾಜಕುಮಾರ ಹೇಡೆ, ರವಿ ಗಂಗಾ, ಜೈವಂತ್, ಹಾಗೂ ಊರಿನ ಮುಖಂಡರಾದ ಝರೆಪ್ಪಾ ಸಿಂಗೆ, ಸಂಜು ಚವ್ಹಾಣ್, ಬಸವರಾಜ ಅಗನೂರೆ, ರಾಜು ಅಗನೂರೆ, ನಾಗನಾಥ್ ಅಗನೂರೆ, ಮಾರುತಿ ಅಡಕೆ, ತುಕರಾಮ್ ಅಡಕೆ, ಪುಂಡಲಿಕ ಅಡಕೆ, ರಾಜು ಅಡಕೆ, ಸಂಜು ಅಡಕೆ, ಗಣಪತಿ, ಓಂಕಾರ್ ಮೇತ್ರೆ, ಚಂದ್ರಕಾಂತ ನೆಳಗೆ, ಆಕಾಶ ಚಾಂಬಳೆ ಸೇರಿದಂತೆ ಇತರರು ಹಾಜರಿದ್ದರು.