ಮೈಸೂರು: ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಮೇಲೆ ರಾಜಕೀಯ ನಿವೃತ್ತಿಯಾಗುವ ಪರಿಸ್ಥಿತಿ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯತ್ ಭರವಸೆ ಈಡೇರಿಸದಿದ್ದಲ್ಲಿ ರಾಜೀನಾಮೆ ಕೊಡುವ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಕಾಲದಲ್ಲಿ ಎಸ್ಕಾಂಗಳು ನಷ್ಟದಲ್ಲಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 8 ಸಾವಿರ ಕೋಟಿ ನೇರ ಮತ್ತು 13000 ಸಾವಿರ ಕೋಟಿಯನ್ನು ಸಾಲದ ರೂಪದಲ್ಲಿ ಕೊಟ್ಟು ಎಸ್ಕಾಂಗಳನ್ನು ಉಳಿಸಲಾಗಿದೆ. ಇದರಿಂದಾಗಿ ನಿರಂತರವಾದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ವೈಜ್ಞಾನಿಕವಾಗಿ 75 ಯೂನಿಟ್ ಕೊಡುತ್ತಿದ್ದೇವೆ. 200 ಯೂನಿಟ್ ವಿದ್ಯುತ್ ಕೊಡಲು ಯಾವ ಮಾನದಂಡ ಅನುಸರಿಸಲಿದ್ದಾರೆ ಸೋಲಿನ ಭೀತಿಯಿಂದ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಬಿಪಿಎಲ್ ಕಾರ್ಡುದಾರರಿಗೆ ಮೊದಲು 30 ಕೆಜಿ, ನಂತರ ೭ಕೆಜಿ, ಅಮೇಲೆ ನಾಲ್ಕು ಕೆಜಿಗೆ ತಂದು ನಿಲ್ಲಿಸಿದ್ದರು. ಚುನಾವಣೆ ಬರುತ್ತಿದ್ದಂತೆ 7 ಕೆಜಿ ಕೊಡುವುದನ್ನು ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಟ್ತ್ಯಾಕ್ ರೆಕಾರ್ಡ್ ಗೊತ್ತಿದೆ ಎಂದು ಲೇವಡಿ ಮಾಡಿದರು.
ಪ್ರಧಾನಮಂತ್ರಿ ಮೋದಿ ಅವರನ್ನು ಹಿಟ್ಲರ್ ಎಂದು ಜರೆದಿರುವ ಕುರಿತು ಕಿಡಿಕಾರಿದ ಬಸವರಾಜ ಬೊಮ್ಮಾಯಿ, ಗುಜರಾತ್ ಚುನಾವಣೆ ವೇಳೆ ಬಾಯಿಗೆ ಬಂದಂತೆ ಮಾತನಾಡಿದ ಪರಿಣಾಮ ಅಲ್ಲಿನ ಫಲಿತಾಂಶ ಏನಾಯಿತು ಎಂಬುದು ಗೊತ್ತಿದೆ. ಮೋದಿಯನ್ನು ಟೀಕೆ ಮಾಡಿದಷ್ಟು ಅತ್ಯಧಿಕ ಬಹುಮತಗಳಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಟೀಕೆಯ ಬಗ್ಗೆ ನಾನೇನೂ ಹೇಳಲಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ,ಅವ್ಯವಹಾರಗಳ, ದೌಭಾರ್ಗ್ಯಗಳ ಬಗ್ಗೆ ಮಾತನಾಡುತ್ತೇವೆಯೇ ಹೊರತು ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಅವರ ಟೀಕೆಯ ಪದಗಳನ್ನು ನೋಡಿದರೆ ಸಿದ್ದರಾಮಯ್ಯ ಸಂಸ್ಕೃತಿ, ರಾಜಕಾರಣದ ಸಂಸ್ಕೃತಿ ಅರ್ಥವಾಗಲಿದೆ ಎಂದರು.