ಮೈಸೂರು: ಕಪಿಲಾ ನದಿ ದಂಡೆಯಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಾತ್ರಾ ಸಂಭ್ರಮ ಆರಂಭಗೊಂಡಿದ್ದು, ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಅದ್ಧೂರಿ ಜಾತ್ರೆಯಲ್ಲಿ ಸಂಭ್ರಮಿಸಲು ಜನ ತವಕಿಸುತ್ತಿದ್ದಾರೆ. ಸುತ್ತೂರು ಜಾತ್ರೆಗೆ ಸುತ್ತಲಿನ ಗ್ರಾಮಗಳ ಜನರಲ್ಲದ ಹೊರಗಿನಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಜನ ಆಗಮಿಸುವುದು ವಿಶೇಷವಾಗಿದೆ.
ಈಗಾಗಲೇ ಜಾತ್ರೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಾತ್ರೆ ಹಿನ್ನಲೆಯಲ್ಲಿ ಮುನ್ನ ದಿನವಾದ ಮಂಗಳವಾರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರ್ತೃ ಗದ್ದಿಗೆ ಶ್ರೀ ಶಿವರಾತ್ರೇಶ್ವರರ ಪೂಜೆಯೊಂದಿಗೆ ಹಾಗೂ ದಾಸೋಹ ಭವನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದಾರೆ.
ಮಂಗಳವಾರ ರಾತ್ರಿಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಹಿರಿಯರ ಮನೆ ಆವರಣದಲ್ಲಿ ದಕ್ಷಯಜ್ಞ ನಾಟಕ ಪ್ರದರ್ಶನಗೊಂಡಿತು. ಗದ್ದುಗೆ ಆವರಣದಲ್ಲಿ ಜನಪದ ಗೀತ ಗಾಯನ, ತತ್ವಪದ ಗಾಯನ, ಭಕ್ತಗೀತೆ, ರಂಗಗೀತೆ, ಭರತನಾಟ್ಯ ಪ್ರದರ್ಶನಗೊಂಡಿತು.
ಈಗಾಗಲೇ ಜಾತ್ರೆಯ ಮುಖ್ಯ ಆಕರ್ಷಣೆಯಾಗಿರುವ ವಸ್ತುಪ್ರದರ್ಶನ, ಕೃಷಿ, ಸಿರಿಧಾನ್ಯ ಮತ್ತು ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಂಗೋಲಿ ಮತ್ತು ಸೊಬಾನೆ ಪದ ಸ್ಪರ್ಧೆ, ದೋಣಿ ವಿಹಾರಕ್ಕೆ ಇಂದು (ಜ.18 ) ಚಾಲನೆ ಸಿಗಲಿದ್ದು, ಜಾತ್ರೆ ವಿಧ್ಯುಕ್ತವಾಗಿ ಆರಂಭಗೊಳ್ಳಲಿದೆ. ಸುತ್ತೂರಿನಲ್ಲಿರುವ ದೇಗುಲಗಳು, ಮಠದ ಕಚೇರಿಗಳು, ಶಾಲೆ, ವಸತಿ ನಿಲಯಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಪೂಜಾ ಕಾರ್ಯಗಳಿಗೆ ಸಿದ್ಧತೆ ಪೂರ್ಣಗೊಂಡಿದೆ.
ಜಾತ್ರೆಯಲ್ಲಿ ಸಂಜೆ 4 ಗಂಟೆಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮನ್ವಯದಲ್ಲಿ ಹೊಸಮಠದ ಚಿದಾನಂದ ಸ್ವಾಮೀಜಿ, ಕಾಸರಗೋಡಿನ ಎಡನೀರು ಮಠದ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭಾಗವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಎಸ್.ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಸ್ತುಪ್ರದರ್ಶನಕ್ಕೆ ಸಚಿವ ಮುರುಗೇಶ ರುದ್ರಪ್ಪ ನಿರಾಣಿ, ಕೃಷಿ ಮೇಳಕ್ಕೆ ಬಿ.ಸಿ.ಪಾಟೀಲ್, ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ಕೆ.ಸುಧಾಕರ್, ಸಾಂಸ್ಕೃತಿಕ ಮೇಳ ಕೂಟವನ್ನು ಶ್ರೀನಿವಾಸ ಪೂಜಾರಿ, ಭಜನಾಂಜಲಿಗೆ ಶಶಿಕಲಾ ಅಣ್ಣ ಸಾಹೇಬ್ ಚಾಲನೆ ನೀಡಲಿದ್ದಾರೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದರೆ, ಶಾಸಕಿ ಸೌಮ್ಯ ರೆಡ್ಡಿ ರಂಗೋಲಿ ಹಾಗೂ ಸೋಬಾನೆ ಪದ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಶಾಸಕ ಯತೀಂದ್ರ ಸಿದ್ದರಾಮಯ್ಯ ದೋಣಿ ವಿಹಾರಕ್ಕೆ ಚಾಲನೆ ನೀಡುವರು. ಶಾಸಕ ಸಿ.ಎಸ್.ನಿರಂಜನಕುಮಾರ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ವಿ.ಲೋಕೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.