ಕೆ.ಆರ್.ನಗರ: ಕಳೆದ ಹದಿನಾಲ್ಕು ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ದ್ವೇಷ ಮತ್ತು ಜಾತಿ ರಾಜಕಾರಣ ಮಾಡಿಲ್ಲ ಎಂದು ಶಾಸಕ ಸಾ. ರಾ. ಮಹೇಶ್ ಹೇಳಿದರು.
ಸಾಲಿಗ್ರಾಮ ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಒಟ್ಟು 50 ಲಕ್ಷ ರೂ ವೆಚ್ಚದಲ್ಲಿ ಬಸವೇಶ್ವರ ದೇವಾಲಯದ ಅಭಿವೃದ್ದಿ ಮತ್ತು ಗ್ರಾಮ ಪರಿಮಿತಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಅನುದಾನ ತರುವುದರೊಂದಿಗೆ ವೈಯಕ್ತಿಕವಾಗಿಯೂ ಸಾಧ್ಯವಾದಷ್ಟು ಸೇವೆ ಮಾಡಿದ್ದು ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುತ್ತೇನೆಂದು ತಿಳಿಸಿದರು.
ಅಧಿಕಾರ ಎಂದಿಗೂ ಶಾಶ್ವತವಲ್ಲ ಆದರೆ ನಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ನೊಂದವರು ಮತ್ತು ಹಿಂದುಳಿದವರ ನೆರವಿಗೆ ಬರುವುದು ಎಲ್ಲರ ಕರ್ತವ್ಯ. ಇದನ್ನು ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಯು ಮನಗೊಂಡು ಕೆಲಸ ನಿರ್ವಹಿಸಿದರೆ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದೆಂದು ಅಭಿಪ್ರಾಯಪಟ್ಟರು. ರಾಜಕಾರಣ ಮಾಡಿಕೊಂಡು ಸಾರ್ವಜನಿಕ ಜೀವನದಲ್ಲಿ ಇದ್ದು ಚುನಾಯಿತ ಜನಪ್ರತಿನಿಗಳಾಗುವವರು ತಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಕೆಲಸ ಮಾಡುವುದು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಇದು ಅತ್ಯಂತ ವಿಷಾದನೀಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಪರವಾಗಿ ಶಾಸಕ ಸಾ. ರಾ. ಮಹೇಶ್ ಮತ್ತು ಅವರ ಪತ್ನಿ ಅನಿತಾ ಸಾ. ರಾ. ಮಹೇಶ್ ಅವರನ್ನು ಸನ್ಮಾನಿಸಲಾಯಿತು