ಬಿಟ್ಟಂಗಾಲ: ಕಳೆದ ಭಾನುವಾರ ರಾತ್ರಿ ಬಿಟ್ಟಂಗಾಲ ಸಮೀಪದ ನಾಂಗಾಲ ಗ್ರಾಮದಲ್ಲಿ ಆರತಿ ಎಂಬಾಕೆಯನ್ನು ಹತ್ಯೆ ಮಾಡಿದ ಆರೋಪಿ ಕಂಡಂಗಾಲ ಗ್ರಾಮದ ಟವಿ ತಿಮ್ಮಯ್ಯನ ಮೃತ ದೇಹ 1ನೇ ರುದ್ರಗುಪ್ಪೆಯ ಕೆರೆಯಲ್ಲಿ ತಡ ರಾತ್ರಿ ಪತ್ತೆಯಾಗಿದೆ. ಈತನೇ ಹಂತಕ ಎನ್ನುವ ಅನುಮಾನಕ್ಕೆ ಕಾರಣ.
ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಆರತಿ ಇತ್ತೀಚಿಗೆ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದಳು. ಹೊಸ ನೌಕರಿ ದೊರೆತ ಸಂಭ್ರಮದಲ್ಲಿದ್ದ ಈಕೆಗೆ ಟವಿ ತಿಮ್ಮಯ್ಯ ಹತ್ಯೆ ಮಾಡುವ ಮೂರು ದಿನಗಳಿಂದ ಕಿರುಕುಳ ನೀಡುತ್ತಿದ್ದ ಅಲ್ಲದೇ ಈತನೇ ಕೊಲೆಯಾಗಿರುವ ಆರತಿಯ ಮೊಬೈಲ್ ಗೆ ಕೊನೆಯ ಕರೆ ಮಾಡಿದವನಾಗಿದ್ದಾನೆ ಎಂದು ಹೇಳಲಾಗಿದೆ. ಆರತಿ ಕೊಲೆಯಾಗಿರುವ ಸ್ಥಳದಿಂದ ತುಸು ದೂರದಲ್ಲಿ ಟವಿ ತಿಮ್ಮಯ್ಯನ ಹೆಲ್ಮೆಟ್ ದೊರೆತಿದೆ.
ಅನುಮಾನದಿಂದ ಪೊಲೀಸರು ಕಂಡಂಗಾಲದಲ್ಲಿರುವ ಮನೆಯವರನ್ನು ವಿಚಾರಿಸಿದಾಗ ಈತ ಮನೆಯಿಂದ ಹೆಲ್ಮೆಟ್ ನೊಂದಿಗೆ ಹೋದವನು ಹಿಂತಿರುಗಿ ಬಂದಾಗ ಹೆಲ್ಮೆಟ್ ಇರಲಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ಎಲ್ಲಾ ಅಂಶಗಳು ಈತನೇ ಆರತಿಯನ್ನು ಹತ್ಯೆ ಮಾಡಿರಬಹುದು ಎಂಬ ಅನುಮಾನದ ಹುತ್ತ ಸುತ್ತಲಾರಾಂಭಿಸಿದೆ.
ತನಿಖೆಯ ಜಾಡು ಹಿಡಿದ ಪೊಲೀಸರಿಗೆ 1ನೇ ರುದ್ರಗುಪ್ಪೆಯ ಕೆರೆಯ ಬಳಿ ಟವಿಯ ಮೊಬೈಲ್, ಪಾದರಕ್ಷೆ, ಖಾಲಿ ಮದ್ಯದ ಬಾಟಲಿ ಹಾಗೂ ಅರ್ಧ ಖಾಲಿಯಾಗಿರುವ ವಿಷದ ಬಾಟಲಿ ಕಂಡುಬಂದಿದೆ. ಆರತಿಯನ್ನು ಕೊಲೆ ಮಾಡಿದ ನಂತರ ಗಡಿಬಿಡಿಯಲ್ಲಿ ಹೆಲ್ಮೆಟ್ ನ್ನು ಅಲ್ಲಿಯೇ ಬಿಟ್ಟು ಹಿಂತಿರುಗಿ ಬಂದು ಮದ್ಯದೊಂದಿಗೆ ವಿಷ ಬೆರೆಸಿ ಸೇವಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.
ಈತನಿಗಾಗಿ ಎರಡು ದಿನಗಳಿಂದ ಕೆರೆಯಲ್ಲಿ ಶೋಧಕಾರ್ಯ ನಡೆಸಲಾಯಿತಾದರೂ ಪ್ರಯೋಜನವಾಗಿರಲಿಲ್ಲ. ನೆನ್ನೆ ಕೆರೆಯ ನೀರನ್ನು ಖಾಲಿ ಮಾಡಿ ಕಾರ್ಯಾಚರಣೆ ನಡೆಯಿಸಿದಾಗ ತಡ ರಾತ್ರಿ ಮೃತ ದೇಹ ಪತ್ತೆಯಾಗಿದೆ. ಈತ ಆರತಿಯನ್ನು ಕೊಲೆ ಮಾಡಿದ ನಂತರ ಮದ್ಯದೊಂದಿಗೆ ವಿಷ ಬೆರೆಸಿ ಸೇವಿಸಿದ ನಂತರ ಕೆರೆಗೆ ಹಾರಿ ಇಹಲೋಕ ತ್ಯಜಿಸಿದ್ದಾನೆ.