ಮಂಡ್ಯ: ಮಂಡ್ಯ ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಅದರಲ್ಲೂ ದನ ಮತ್ತು ಎಮ್ಮೆಗಳಲ್ಲಿ ಕಾಣಿಸಿಕೊಳ್ಳುವ ಸಂಭವವಿರುವ ಕಾರಣ ಎಚ್ಚರ ವಹಿಸುವಂತೆ ಮಂಡ್ಯ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಚರ್ಮಗಂಟು ರೋಗವು ಕ್ಯಾಪ್ರಿ ಫಾಕ್ಸ್ ವೈರಾಣುವಿನಿಂದ ಉಂಟಾಗುತ್ತದೆ. ರೋಗವು ಸೊಳ್ಳೆ ನೊಣ, ಉಣ್ಣೆಗಳಿಂದ, ರೋಗಗ್ರಸ್ಧ ಪ್ರಾಣಿಗಳ ನೇರ ಸಂಪರ್ಕ, ಕಲುಷಿತ ನೀರು, ಮತ್ತು ಮೇವಿನಿಂದ ಹರಡುವ ಸಾಧ್ಯತೆ ಇರುತ್ತದೆ. ಮಂದೆಯಲ್ಲಿನ ರಾಸುಗಳಲ್ಲಿ ಶೇ.10 ರಿಂದ ಶೇ.20 ರಷ್ಟು ರಾಸುಗಳು ರೋಗಕ್ಕೆ ತುತ್ತಾಗಬಹುದಾಗಿದ್ದು ಅವುಗಳಲ್ಲಿ ಶೇ.2 ರಿಂದ ಶೇ.5 ರಷ್ಟು ರಾಸುಗಳು ಸಾವನ್ನಪ್ಪಬಹುದು. ರೋಗ ಲಕ್ಷಣಗಳು ಸುಮಾರು 2 ರಿಂದ 5 ಸೇಂಟಿಮೀಟರ್ ಗಾತ್ರದ ಚರ್ಮದ ಗಂಟುಗಳಾಗಿ ಕ್ರಮೇಣ ಈ ಗಂಟುಗಳು ನಾರುಯುತವಾಗಿ ಕೊಳೆತು ಚರ್ಮದ ಮೇಲೆ ಹಕ್ಕಳೆ, ತುರಿಗಳಾಗಿ ಧೀರ್ಘಕಾಲದ ವರೆಗೆ ಉಳಿದು ಬಿಡುತ್ತದೆ. ಗರ್ಭತುಂಬಿದ ಆಕಳುಗಳಲ್ಲಿ ಗರ್ಭಪಾತವಾಗಿ ಬಹುಕಾಲ ಬಂಜೆಯಾಗಿ ಉಳಿದುಬಿಡುತ್ತದೆ. ರೋಗಗ್ರಸ್ತ ಪ್ರಾಣಿಗಳಲ್ಲಿ ಒಂದುವಾರ ಅತಿಯಾದ ಜ್ವರ, ಮಂಕಾಗಿದ್ದು ಕಣ್ಣುಗಳಲ್ಲಿ ನೀರು ಸೂರುವಿಕೆ, ಜೋಲ್ಲು ಸೊರುವುದು, ದುಗ್ದರಸ ಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು.
ಈ ರೋಗವು ವೈರಾಣು ಮೂಲದ ಕಾಯಿಲೆಯಾಗಿರುವುದರಿಂದ ಉತ್ತಮ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ಮಾಡಬೇಕಾಗಿರುತ್ತದೆ. ರೋಗಗ್ರಸ್ಥ ಜಾನುವಾರುಗಳು ಮೃತಪಟ್ಟಲ್ಲಿ ಪಶುವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮವಹಿಸುವುದು. ಜಾನುವಾರು ಮೃತಪಟ್ಟ ಸಂದರ್ಭದಲ್ಲಿ ಸ್ಥಳೀಯ ಇಲಾಖೆಯ ಪಶುವೈದ್ಯರಿಗೆ ಮಾಹಿತಿ ನೀಡುವುದು.
ಇಲ್ಲವಾದಲ್ಲಿ ಸರ್ಕಾರದಿಂದ ಬರುವಂತಹ ಪರಿಹಾರಕ್ಕಾಗಿ ಅರ್ಹರಾಗಿರುವುದಿಲ್ಲ. ಚರ್ಮಗಂಟು ರೋಗವನ್ನು ನಿಯಂತ್ರಿಸಲು ಎಲ್ಲಾ ಪಶುಪಾಲಕರು ನೈರ್ಮಲ್ಯತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೋಗವನ್ನು ನಿಯಂತ್ರಿಸಲು ಸಕ್ರಿಯವಾಗಿ ಭಾಗವಹಿಸಿ ಇಲಾಖೆಯ ಸಿಬ್ಬಂದಿಯೊಂದಿಗೆ ಸಹಕರಿಸಿ ರೋಗಹರಡಂತೆ ಜಾಗ್ರತೆವಹಿಸುವಂತೆ ಮನವಿ ಮಾಡಿದ್ದಾರೆ.