ಮಂಡ್ಯ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಭಾರತ ಸರ್ಕಾರದ ವಿದ್ಯುತ್ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಖಾತೆ ಸಚಿವರಾದ ಕ್ರಿಶನ್ ಪಾಲ್ ಗುರ್ಜರ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಬಂದೀಗೌಡ ಬಡಾವಣೆಯಲ್ಲಿ ನಡೆದ ಸ್ವಚ್ಛತಾ ಡ್ರೈವ್ಗೆ ಸಚಿವರಾದ ಕ್ರಿಶನ್ ಪಾಲ್ ಗುರ್ಜರ ಚಾಲನೆ ನೀಡಿದರಲ್ಲದೆ, ಉಮ್ಮಡಹಳ್ಳಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಿಕೊಟ್ಟರು ನಂತರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ವೇಳೆ ಮೇಲುಕೋಟೆಯ ರತ್ನಂ ಮತ್ತು ತಂಡದವರು ಸ್ಯಾಕ್ಸೋಪೋನ್ ಕಾರ್ಯಕ್ರಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯ ನಿಸರ್ಗ ಮತ್ತು ತಂಡ ಭರತನಾಟ್ಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು ಆದಿವಾಸಿ ಜನರ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 2021 ರಲ್ಲಿ ಶಿವಪುರದ ಸತ್ಯಗ್ರಹ ಸೌಧದಲ್ಲಿ ಕಾರ್ಯಕ್ರಮವನ್ನು ಮೊದಲು ಪ್ರಾರಂಭಿಸಿ, ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್, ಸೈಕಲಾಥಾನ್, ಯೋಗ ಕಾರ್ಯಕ್ರಮ, ಚಿತ್ರ ಕಲಾ ಕಾರ್ಯಕ್ರಮ, ಖಾದಿ ವಸ್ತುಗಳ ಪ್ರದರ್ಶನ, ಅಂಚೆ ಚೀಟಿ ಹೊರತಂದಿರುವುದು, ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ನಂತರದ ದಿನಗಳಲ್ಲಿ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಕ್ರಿಶನ್ ಪಾಲ್ ಗುರ್ಜರ ಅವರು ಮಂಡ್ಯ ಜಿಲ್ಲೆಯ ಮೂರು ದಿನಗಳ ಪ್ರವಾಸ ನನಗೆ ಅತ್ಯಂತ ಸಂತೋಷ ನೀಡಿದೆ. ಇಲ್ಲಿಯ ವಾತಾವರಣ ತುಂಬ ಚೆನ್ನಾಗಿದೆ ಹಾಗೂ ಜನರು ಹೃದಯ ಸ್ವರ್ಶಿಯಾಗಿದ್ದಾರೆ ಎಂದರು.
ಪ್ರಧಾನ ಮಂತ್ರಿ ಮೋದಿ ಜೀ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದ ಆರ್ಥಿಕ ಸ್ಥಿತಿ ಹಾಗೂ ಗಡಿ ಸಹ ಭದ್ರವಾಗಿದೆ. ಅವರ ಸರ್ಕಾರ ದಕ್ಷತೆ ಇರುವವರಿಗೆ ಮಾತ್ರ ಸ್ಥಾನ ನೀಡಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದರು. ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿ.ಎಂ.ಕಿಶಾನ್ ಯೋಜನೆ, ಸಾರ್ವಜನಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್, ಕುಡಿಯುವ ನೀರು ಒದಗಿಸಲು ಜಲ್ ಜೀವನ್ ಮಿಷನ್, ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.