ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಗಳ ಅದ್ಯಕ್ಷರನ್ನು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಹೊರಗಿಡಲು ರಾಜ್ಯ ಸರ್ಕಾರವು ಯೋಜಿಸಿದ್ದು ಹಣಕಾಸಿನ ವ್ಯವಹಾರದ ಎಲ್ಲ ಚೆಕ್ಗಳಿಗೂ ಸಹಿ ಮಾಡುವ ಅಧಿಕಾರವನ್ನು ಪಿಡಿಒ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಲು ನಿರ್ಧರಿಸಲಾಗಿದೆ.
ದಿನಾಂಕ 19-8-2022 ರಂದು ಬೆಂಗಳೂರಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದೆರ್ಶಿ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿವರವಾಗಿ ಚರ್ಚಿಸಿದ್ದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣಗಳಿಗೆ ತಿದ್ದುಪಡಿ ಮಾಡಲಾಗಿದೆ. ಮತ್ತು ಈ ಕುರಿತು ಅನುಪಾಲನಾ ವರದಿ ನೀಡುವಂತೆ ಇಲಾಖೆಯ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಕ್ಕೆ 2006ರಲ್ಲಿ ಮಾಡಲಾಗಿದ್ದ ತಿದ್ದುಪಡಿಯಂತೆ ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸುವ ಅಧಿಕಾರಿಗಳು ಅಥವಾ ಪ್ರಾಧಿಕಾರ ನಿರ್ವಹಿಸಬಹುದು.ಇಂತಹ ಅಧಿಕಾರವನ್ನುಇಲ್ಲಿಯವರೆಗೂ ಸ್ಥಳೀಯ ಆಡಳಿತದ ಚುನಾಯಿತ ಮುಖ್ಯಸ್ಥರಾದ ಅಧ್ಯಕ್ಷರಿಗೂ ನೀಡಲಾಗಿತ್ತು. ಉದ್ಯೋಗ ಖಾತ್ರಿ,ವಿವಿಧ ವಸತಿ ಯೋಜನೆಗಳ ಅನುಷ್ಟಾನ, ಹಣಕಾಸಿನ ನಿಧಿ, ಪಂಚಾಯಿತಿ ತೆರಿಗೆ, ಖರ್ಚು– ವೆಚ್ಚಗಳ ಎಲ್ಲ ಚೆಕ್ಗಳಿಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಜಂಟಿ ಸಹಿ ಕಡ್ಡಾಯವಾಗಿತ್ತು. ಈಗ ಸರ್ಕಾರ 2006ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಅಧ್ಯಕ್ಷರ ಸಹಿ ಅಧಿಕಾರ ಹಿಂಪಡೆಯಲು ಹೊಸದಾಗಿ ನಡಾವಳಿ ರೂಪಿಸಲಾಗಿದೆ.
ಸಭೆಯಲ್ಲಿ ಹಾಜರಿದ್ದ ಉನ್ನತ ಅಧಿಕಾರಿಗಳ ಪ್ರಕಾರ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಬಿಲ್ ಪಾವತಿ ಮಾಡಲು ಲಂಚ ಪಡೆಯುವಾಗ ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದಲ್ಲದೆ ಅನೇಕ ಪ್ರಕರಣಗಳಲ್ಲಿ ವಿಳಂಬವಾಗಿ ಬಿಲ್ ಪಾವತಿ ಮಾಡುತ್ತಿರುವುದನ್ನೂ ಚರ್ಚಿಸಲಾಗಿದೆ.ಗ್ರಾಮ ಪಂಚಾಯ್ತಿ ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿದ್ದು, ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರಲ್ಲದ ಕಾರಣ ಸರ್ಕಾರಿ ನೌಕರರಾದ ಅಭಿವೃದ್ದಿ ಅಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕರು ಚೆಕ್ ಗಳಿಗೆ ಸಹಿ ಮಾಡುವಂತೆ ಸೂಚಿಸಲಾಗಿದೆ. ಇದುವರೆಗೂ ಗ್ರಾಮ ಪಂಚಾಯಿತಿ ನಿರ್ಣಯ ತೆಗೆದುಕೊಂಡ ನಂತರ,ಪಂಚಾಯಿತಿ ನಿರ್ಣಯ ಸಂಖ್ಯೆ, ದಿನಾಂಕ ನಮೂದಿಸಿ ಇ–ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧಾರ ಪಟ್ಟಿಗಳನ್ನು ವಿತರಿಸಲಾಗುತ್ತಿತ್ತು. ಆದರೆ ಗ್ರಾಮ ಪಂಚಾಯಿತಿ ಸಭೆಗಳು ನಿಗದಿತವಾಗಿ ನಡೆಯದ ಕಾರಣ, ನಮೂನೆ ವಿತರಿಸುವ ಸಂಪೂರ್ಣ ಅಧಿಕಾರವನ್ನು ಪಿಡಿಒಗಳಿಗೇ ನೀಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗೃಹ, ವಾಣಿಜ್ಯ ಕಟ್ಟಡ ಕಾಮಗಾರಿಗಳು, ಕೈಗಾರಿಕೆ, ಗಣಿಗಾರಿಕೆ, ಅಂಗಡಿ, ಹೋಟೆಲ್ ಮತ್ತಿತರ ವಾಣಿಜ್ಯ ವಹಿವಾಟು ಗಳ ಆರಂಭಕ್ಕೆ ಪರವಾನಗಿ, ಇ–ಸ್ವತ್ತು (ನಮೂನೆ–9, 11ಎ, 11ಬಿ) ನೀಡುವ ಕುರಿತು ಈಗ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಪಂಚಾಯತ್ ರಾಜ್ ಕಾಯ್ದೆಯ 64 ರಿಂದ 70ರವರೆಗಿನ ನಿಯಮಗಳಿಗೆ ತಿದ್ದುಪಡಿ ತಂದು ಪರವಾನಗಿ ನೀಡುವ ಅಧಿಕಾರವನ್ನು ಪಿಡಿಒಗಳಿಗೆ ವಹಿಸಲಾಗಿದ್ದು ನೀಡಿದ ನಂತರ ಸಭೆಯ ಗಮನಕ್ಕೆ ತರಲೂ ಸೂಚಿಸಲಾಗಿದೆ. ಈ ತಿದ್ದುಪಡಿ ಜಾರಿ ಆದಲ್ಲಿ ವಿವಿಧ ಉದ್ಯಮವ್ಯಾಪಾರ ಆರಂಬಿಸಲು ನಿರಾಕ್ಷೇಪಣಾ ಪತ್ರವನ್ನು ಪಿಡಿಓ ಅವರೇ ನೀಡಬಹುದಾಗಿದೆ. ಗ್ರಾಮ ಪಂಚಾಯಿತಿ ಸಭೆಗಳು ಸಕಾಲದಲ್ಲಿ ನಡೆಯದ ಕಾರಣ ವಿಳಂಬ ತಪ್ಪಿಸಲು ಇಂತಹ ಕ್ರಮ ಅನಿವಾರ್ಯ ಎಂದು ವಿವರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಲಾಲ್ ಮೀನ ಅವರು ಅದ್ಯಕ್ಷರ ಅಧಿಕಾರ ಮೊಟಕುಗೊಳಿಸಿರುವ ಕುರಿತು ರಾಜ್ಯ ಸರ್ಕಾರದಿಂದ ಈವರೆಗೂ ಯಾವುದೇ ಆದೇಶ ಬಂದಿಲ್ಲ ಎಂದರು.
ಈ ಕುರಿತು ರಾಜ್ಯ ಗ್ರಾಮೀಣಾಭಿವೃದ್ದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರನ್ನು ಸಂಪರ್ಕಿಸಿದಾಗ ಗ್ರಾಮ ಪಂಚಾಯ್ತಿಗಳಲ್ಲಿ ದೈನಂದಿನ ಕೆಲಸಗಳಲ್ಲಿ ವಿಳಂಬವಾಗುತಿದ್ದು ಅದನ್ನು ಸರಿಪಡಿಸಲು 1993 ರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದರು. ನಾವು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದು ಈ ಕುರಿತು ಇನ್ನೂ ಆದೇಶ ಅಥವಾ ಅಧಿಸೂಚನೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.ಈ ಕುರಿತು ಅಂತಿಮವಾಗಿ ಸರ್ಕಾರೀ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿದ್ದು ಅದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ ಎಂದರು.