ಕೆ.ಆರ್.ಪೇಟೆ: ಶಿಕ್ಷಣ ಜ್ಞಾನದ ಶಕ್ತಿಯಾಗಿದ್ದು, ಕಸಿದುಕೊಳ್ಳಲಾಗದ ಆಸ್ತಿ ಆಗಿರುವುದರಿಂದ ಪೋಷಕರು ಮಕ್ಕಳಿಗಾಗಿ ಹಣ, ಆಸ್ತಿಗಿಂತ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ ಜ್ಞಾನವಂತರನ್ನಾಗಿ ಮಾಡಿ ಸಚಿವ ಡಾ.ನಾರಾಯಣಗೌಡ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳನ್ನು ವೀಕ್ಷಿಸಿ ಪೋಷಕರು, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು ಹಾಗೂ ಪ್ರಾಧ್ಯಾಪಕರೊಂದಿಗೆ ಸಂವಾದ ನಡೆಸಿ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ ಎಂದರು.
ಪ್ರಾಧ್ಯಾಪಕರು, ಗುಣಮಟ್ಟದ ಬೋಧನೆ ಮಾಡುತ್ತಾ ಮಕ್ಕಳ ಮನಸ್ಸಿನ ಆಳಕ್ಕೆ ಇಳಿದು, ಅರ್ಥವಾಗುವಂತೆ ಬೋಧನೆ ಮಾಡುತ್ತಿರುವುದರಿಂದ ಅತ್ಯುತ್ತಮವಾದ ಫಲಿತಾಂಶ ಬರುತ್ತಿದೆ. ಈ ಗುಣಮಟ್ಟವನ್ನು ಇನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಕಾಲೇಜಿನ ವಾತಾವರಣವನ್ನು ಅಭಿವೃದ್ಧಿಪಡಿಸಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವುದು ಸೇರಿದಂತೆ ಕಾಲೇಜಿಗೆ ಅಗತ್ಯವಾಗಿ ಬೇಕಾದ ಪಿಠೋಪಕರಣಗಳು ಕಂಪ್ಯೂಟರ್ ಲ್ಯಾಬ್, ಮುಂತಾದ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದರು.
ಪ್ರಸ್ತುತ ಕಾಲೇಜು ಗುಣಮಟ್ಟದ ಮೌಲ್ಯಾಂಕನದಲ್ಲಿ ಬಿ. ಶ್ರೇಣಿಯನ್ನು ಪಡೆದಿದೆ. ಇದೇ ತಿಂಗಳ 24ಮತ್ತು 25 ರಂದು ಕಾಲೇಜಿನ ಗುಣಮಟ್ಟವನ್ನು ಅಳತೆ ಮಾಡಲು ನ್ಯಾಕ್ ಸದಸ್ಯರ ತಂಡವು ನವದೆಹಲಿ ಯಿಂದ ನಮ್ಮ ಕಾಲೇಜಿಗೆ ಆಗಮಿಸುತ್ತಿದೆ. ಈ ಬಾರಿ ನಮ್ಮಲ್ಲಿರುವ ಸೌಲಭ್ಯಗಳನ್ನು ಇನ್ನೂ ಹೆಚ್ಚಾಗಿ ಅಭಿವೃದ್ದಿಪಡಿಸಿ ಈ ಬಾರಿ ನಾವು ಎ ಶ್ರೇಣಿಯನ್ನು ಕಾಲೇಜಿಗೆ ತಂದುಕೊಡಲು ಒಗ್ಗಟ್ಟಿನ ಪ್ರಯತ್ನ ಮಾಡಿ ಯಶಸ್ವಿಯಾಗಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.
ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸುವ ರಸ್ತೆ ಅಭಿವೃದ್ಧಿ, ಬೀದಿ ದೀಪಗಳ ನಿರ್ವಹಣೆ, ಶೌಚಾಲಯದ ದುರಸ್ತಿ, ಕಾಲೇಜು ಕಟ್ಟಡಕ್ಕೆ ಸುಣ್ಣಬಣ್ಣ ಹೊಡೆಸುವುದು, ಕಟ್ಟಡದ ಕೊಠಡಿಗಳ ಒಡೆದಿರುವ ಕಿಟಕಿಗಳ ಗಾಜುಗಳನ್ನು ಬದಲಾಯಿಸಿ ದುರಸ್ತಿಮಾಡುವುದು ಸೇರಿದಂತೆ ಅಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿ ಬಸವರಾಜು ಅವರಿಗೆ ಸೂಚಿಸಿದ ಸಚಿವರು ಕರ್ನಾಟಕ ಬ್ಯಾಂಕ್, ವಿಜಯಾಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜಾಕಿ ಗಾರ್ಮೆಂಟ್ಸ್, ಹಾಗೂ ಕೋರಮಂಡರ್ ಸಕ್ಕರೆ ಕಾರ್ಖಾನೆಯ ಸಿಎಸ್ಆರ್ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಅಗತ್ಯವಾಗಿ ಬೇಕಾದ ಪೀಠೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ಪಡೆದುಕೊಂಡು ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಪ್ರಾಂಶುಪಾಲೆ ಹೇಮಲತಾ ಅವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಕಾಳೇಗೌಡ, ನಾ.ನಾಗರಾಜು, ಮೈಲಾರಿ ರವಿ, ಅರವಿಂದ್ ಕಾರಂತ್, ಪ್ರೆಸ್ ಕುಮಾರಸ್ವಾಮಿ, ಎಚ್.ಆರ್.ಲೋಕೇಶ್, ಕೆ.ಆರ್.ನೀಲಕಂಠ, ಕಾಲೇಜಿನ ವ್ಯವಸ್ಥಾಪಕಿ ಆರ್.ಸುಧಾ, ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಡಿ.ಉಮಾಶಂಕರ್, ಮತ್ತೀತರರು ಉಪಸ್ಥಿತರಿದ್ದರು.