ಕೆ.ಆರ್.ಪೇಟೆ: ರೈತ ಮಹಿಳೆಯೊಬ್ಬರು ಕಷ್ಟಪಟ್ಟು ಬೆಳೆಸಿದ್ದ ನೂರಾರು ತೆಂಗಿನ ಸಸಿಗಳನ್ನು ಕಾಡು ಹಂದಿಗಳು ದಾಳಿ ನಡೆಸಿ ನಾಶಪಡಿಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಟನಹಳ್ಳಿ ಗ್ರಾಮದ ರೈತ ಮಹಿಳೆ ದೇವಮ್ಮ ಎಂಬುವರು ತಮಗೆ ಸೇರಿದ ಜಮೀನಿನಲ್ಲಿ ಸುಮಾರು 110 ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದರು. ತೆಂಗಿನ ಸಸಿಗಳಿಗೆ ಈಗಾಗಲೇ ಸುಮಾರು ನಾಲ್ಕು ವರ್ಷಗಳು ತುಂಬಿದ್ದು ಚೆನ್ನಾಗಿ ದಿಂಡುಗಟ್ಟಿ ಬೆಳೆಯುತ್ತಿದ್ದವು. ಕಳೆದ ಎರಡು ದಿನಗಳ ಹಿಂದೆ ದೇವಮ್ಮನವರ ಜಮೀನಿಗೆ ರಾತ್ರಿ ವೇಳೆ ದಾಳಿ ಮಾಡಿರುವ ಗವೀಮಠ ಕಾಡಿನಿಂದ ಬಂದಿರುವ ಕಾಡು ಹಂದಿಗಳು ತೆಂಗಿನ ಸಸಿಗಳ ಕಾಂಡವನ್ನು ಸಿಗಿದು ನಾಶಪಡಿಸಿವೆ. ಕಾಡುಹಂದಿಗಳ ಹಾವಳಿಗೆ ಹಲವು ತೆಂಗಿನ ಸಸಿಗಳು ಬೇರು ಸಮೇತ ಕೆಳಗುರುಳಿದ್ದರೆ ಮತ್ತಷ್ಟು ಮರಗಳು ಕಾಂಡ ಕೊರೆತಕ್ಕೆ ಸಿಲುಕಿ ಹಾಳಾಗಿವೆ. ಸುಮಾರು ನೂರಕ್ಕೂ ಹೆಚ್ಚು ತೆಂಗಿನ ಸಸಿಗಳು ಹಾನಿಗೊಳಗಾಗಿರುವುದರಿಂದ ರೈತ ಮಹಿಳೆ ದೇವಮ್ಮ ಅವರಿಗೆ ಲಕ್ಷಾಂತರ ರೂ ನಷ್ಠಕ್ಕೆ ಒಳಗಾಗಿದ್ದಾರೆ.
ತಾಲೂಕಿನ ತೋಟಗಾರಿಕೆ, ಕೃಷಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಆಡಳಿತವು ದೇವಮ್ಮನವರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ನಷ್ಟ ಪರಿಹಾರ ನೀಡುವಂತೆ ನಾಟನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.