ಕೆ.ಆರ್.ಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠವೆಂದೇ ಪ್ರಖ್ಯಾತವಾಗಿರುವ ಭೂದೇವಿ ಸಮೇತವಾಗಿ ನೆಲೆಸಿರುವ ಕಲ್ಲಹಳ್ಳಿಯ ಶ್ರೀಲಕ್ಷ್ಮೀಭೂವರಹನಾಥ ಕ್ಷೇತ್ರದಲ್ಲಿ ಭೂವರಹನಾಥ ಶಿಲಾಮೂರ್ತಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಮಾಡಿ ಅಡ್ಡಪಲ್ಲಕಿ ಉತ್ಸವ ನಡೆಸಲಾಯಿತು.
ದೇಶದಲ್ಲಿಯೇ ಅಪರೂಪದ್ದಾಗಿರುವ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣಶಿಲೆಯ ಭೂವರಹನಾಥ ಶಿಲಾಮೂರ್ತಿಗೆ ಪವಿತ್ರ ಗಂಗಾಜಲ, ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಜೇನುತುಪ್ಪ, ಹಸುವಿನತುಪ್ಪ, ಮೊಸರು, ಸುಗಂಧ ದ್ರವ್ಯಗಳಿಂದ ಅಭಿಷೇಕಮಾಡಿ, ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಕಮಲ, ಪವಿತ್ರ ಪತ್ರೆಗಳು, ಜವನ, ತುಳಸಿ, ಪಾರಿಜಾತ ಸೇರಿದಂತೆ ೫೮ಬಗೆಯ ವಿವಿಧ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ನಡೆಸಿ, ಸ್ವಾಮಿಯ ಉತ್ಸವ ಮೂರ್ತಿಗಳ ಅಡ್ಡಪಲ್ಲಕಿ ಉತ್ಸವ ನಡೆಯಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಮಾತನಾಡಿ ಭೂವರನಾಥ ಕ್ಷೇತ್ರವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ಮೂರು ಪ್ರಾಕಾರಗಳ ದೇವಾಲಯವನ್ನಾಗಿ 50ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ 178 ಅಡಿ ಎತ್ತರದ ರಾಜಗೋಪುರವನ್ನು ವಾಸ್ತುಬದ್ಧವಾಗಿ ನಿರ್ಮಿಸಿ ಹೊಯ್ಸಳ ವಾಸ್ತುವೈಭವದ ದೇವಾಲಯವನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಮುರುಡೇಶ್ವರ, ಮೂಡಬಿದರೆ, ತಮಿಳುನಾಡಿನ ತಂಜಾವೂರು, ರಾಜಸ್ಥಾನದಿಂದ ಶಿಲ್ಪಿಗಳು ಆಗಮಿಸಿದ್ದು ಹಗಲಿರುಳೆನ್ನದೇ ದೇವಾಲಯದ ನಿರ್ಮಾಣ ಕಾರ್ಯವು ವಿಶೇಷವಾಗಿ ಗ್ರಾನೈಟ್ ಕಲ್ಲಿನಿಂದಲೇ ನಿರ್ಮಿಸಲಾಗುತ್ತಿದೆ. ಚಿತ್ರಪಟ್ಟಿಕೆಗಳು, 108 ಕಾಲುಗಳ ಮುಖಮಂಟಪ, ಮೃಚ್ಛಿಕೆಗಳು, ನವರಂಗ, ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದು ವೈಭವವಾದ ದೇವಾಲಯವು ಕೃಷ್ಣರಾಜಪೇಟೆ ತಾಲೂಕಿನ ಹೇಮಾವತಿ ನದಿಯ ದಡದಲ್ಲಿ ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಹಿರಿಮೆಗೆ ಗರಿಮೂಡಿಸಿದಂತಾಗಿದೆ ಎಂದು ರಾಘವನ್ ಹೇಳಿದರು.
ನಾಲ್ಕೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಶಿವಿಶ್ವನಾಥನ ಸನ್ನಿಧಿಯ ಮಾದರಿಯಲ್ಲಿ ಸೋಪಾನಘಟ್ಟ, ಸ್ನಾನಗೃಹ, ಶೌಚಗೃಹಗಳು ಹಾಗೂ ಸುಂದರವಾದ ಹೂದೋಟದ ನಿರ್ಮಾಣಕ್ಕೆ ಸಚಿವ ಡಾ.ನಾರಾಯಣಗೌಡರ ನೇತೃತ್ವದಲ್ಲಿ ಭೂಮಿ ಪೂಜೆ ಮಾಡಲಾಗಿದ್ದು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.