ಮಂಡ್ಯ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ದಂತ ಆರೋಗ್ಯ ಹಳ್ಳಿಯ ಕಡೆಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಕಾರ್ಯಕ್ರಮವು ಆರಂಭಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ಜನರು ಇದರ ಸದುಪಯೋಗ ಪಡೆಯಿರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಗ್ರಾಮ, ಹಳ್ಳಿಗಳಲ್ಲಿ ಜನಸಾಮಾನ್ಯರಿಗೆ ದಂತ ಚಿಕಿತ್ಸೆ ಪಡೆಯಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಾಜ್ಯದಲ್ಲೇ ಪ್ರಥಮ ಬಾರಿಗೆ ಆರೋಗ್ಯ ಇಲಾಖೆಯಿಂದ ಗ್ರಾಮಗಳಲ್ಲಿ ಮುಗಳ್ನಗೆಯ ಸಿಂಚನ ಯೋಜನೆ ಪ್ರಾರಂಭಿಸಿದ್ದು, ಅವರು ಶುಕ್ರವಾರ ಮಿಮ್ಸ್ ಆಡಿಟೋರಿಯಂನಲ್ಲಿ ಚಾಲನೆ ನೀಡಿ ಮಾತನಾಡಿದರು.
ದಂತ ಚಿಕಿತ್ಸೆಗೆ ಬಳಸುವ ಯಂತ್ರಗಳು ದುಬಾರಿಯಾಗಿದ್ದು, ಚಿಕಿತ್ಸಾ ವೆಚ್ಚವು ದುಬಾರಿಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನರು ದಂತ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ.
ತಾಲೂಕಿನ ಪ್ರತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಶಿಬಿರಗಳಿಗೆ ಸಂಚಾರಿಸಿ ತಜ್ಞ ದಂತ ವೈದ್ಯರು ಸಿಬ್ಬಂದಿಗಳು ಉಚಿತವಾಗಿ ಸ್ಥಳದಲ್ಲೇ ಕೆಲವು ಸರ್ವೇ ಸಾಮಾನ್ಯ ಬಾಯಿ ದಂತ ಕಾಯಿಲೆಗೆ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸಿದರು. ಆರೋಗ್ಯ ಇಲಾಖೆಗೆ ಹಾಗೂ ಎಲ್ಲಾ ವೈದ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು.
ಬಾಯಿ ದಂತ ತಪಾಸಣೆ ಹಾಗೂ ಸಲಹೆ, ಬಾಯಿ ಕ್ಯಾನ್ಸರ್ ಸ್ಕ್ರೀನಿಂಗ್, ಹಲ್ಲು ಕೀಳುವುದು, ಹಲ್ಲು ತುಂಬಿಸುವುದು, ಬಾಯಿ ಮುಖಗಳ ಗಾಯ ಸ್ವಚ್ಛಗೊಳಿಸುವುದು, ಪ್ಲ್ಯೂರೋಸಿಸ್ ತಪಾಸಣೆ ಹಾಗೂ ಚಿಕಿತ್ಸೆ, ದಂತ ಸ್ವಚ್ಛತೆ ಮಾಡಲಾಗುವು ದು.
ದಂತ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿಗಾಗಿ ಸ್ಥಳದಲ್ಲೇ ರೆಫರಲ್ ಕಾರ್ಡ್ ನೀಡುವುದು ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದು. ಜಿಲ್ಲೆಯ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಇಲಾಖೆಯಲ್ಲಿ ಸುಮಾರು18 ದಂತ ಆರೋಗ್ಯ ವೈದ್ಯಾಧಿಕಾರಿಗಳಿದ್ದು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಳನ್ನು ಸಾರ್ವಜನಿಕರಿಗೆ ಈಗಾಗಲೇ ನೀಡುತ್ತಿದ್ದಾರೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಮಾತನಾಡಿ, ಬಾಯಿ ದಂತ ಸಂಬಂಧವಿರುವ ಅನೇಕ ಮೂಢನಂಬಿಕೆಗಳಾದ ಹಲ್ಲು ಕಿತ್ತರೆ ಕಣ್ಣು ಕಾಣುವುದಿಲ್ಲ ಮಂಜಾಗುವುದು, ದಂತ ಸ್ವಚ್ಛಗೊಳಿಸಿದರೆ ಹಲ್ಲು ಸಡಿಲವಾಗುತ್ತದೆ, ದಂತಕ್ಷಯದಲ್ಲಿ ಹುಳು ಹರಿದಾಡುತ್ತದೆ ಎಂಬ ತಪ್ಪು ತಿಳುವಳಿಕೆಗಳಿವೆ ಎಂದರು.
ಬಾಯಿ ಅನಾರೋಗ್ಯದಿಂದ ಹೃದಯ ಸಂಬಂಧಿ, ಉಸಿರಾಟದ ಸಂಬಂಧಿ ಕಾಯಿಲೆಗಳು ಸ್ಟ್ರೋಕ್, ಡೈಮೇನ್ಸಿಯ, ಅಪೌಷ್ಟಿಕತೆ, ಅಜೀರ್ಣ ಇತ್ಯಾದಿಗಳು ಕಾಣಿಸಿಕೊಳ್ಳುವ ಕಾರಣ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವಿಶೇಷವಾಗಿ ಗರ್ಭಿಣಿ ಬಾಣಂತಿಯರಲ್ಲಿ ಜಾಗೃತಿ ಅರಿವು ಮೂಡಿಸುವುದು ಸಂಚಾರಿ ಬಾಯಿದಂತ ಆರೋಗ್ಯ ಸೇವೆಯ ಸದುದ್ದೇಶವಾಗಿದೆ ಎಂದರು.