ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಕೊಪ್ಪಲು ಗ್ರಾಮದ ಕಾಲಭೈರವೇಶ್ವರ ದೇವರ ಬಸವ ವಯೋಸಹಜ ಸಾವನ್ನಪ್ಪಿದ್ದು 101 ಬಗೆಯ ವಿಶೇಷ ಪೂಜಾ ಕೈಂಕರ್ಯದ ಬಳಿಕ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ನೆರವೇರಿಸಿದರು.
ಗಂಜಿಗೆರೆ ಕೊಪ್ಪಲು ಗ್ರಾಮದ ಮಹೇಶ್ ಎಂಬುವರ ಜಮೀನಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಕಮರಿ ಸಿದ್ದೇಶ್ವರ, ಚಿಕ್ಕಯ್ಯ ಸ್ವಾಮಿ ದೇವರ ಪೂಜಾರಿಗಳು ಸಂಪ್ರದಾಯದಂತೆ ಅಂತಿಮ ಪೂಜಾ ಕೈಂಕರ್ಯಗಳನ್ನು ಮಾಡಿದ ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮಸ್ಥರು ಬಸವನಿಗೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದರು ಬಳಿಕ ಅಂತ್ಯ ಸಂಸ್ಕಾರ ನಡೆಯಿತು.
ಈ ಬಸವನನ್ನು ಕಾಲಭೈರವೇಶ್ವರ ದೇವರ ಹರಕೆಯಾಗಿ 18ವರ್ಷಗಳ ಹಿಂದೆ ಗಂಜಿಗೆರೆ ಕೊಪ್ಪಲು ಗ್ರಾಮದಲ್ಲಿ ಬಿಡಲಾಗಿತ್ತು. ಇದರ ಸೇವೆಯನ್ನು ಪೂಜಾರಿ ಪ್ರತಾಪ್ ಎಂಬುವರು ಮಾಡಿಕೊಂಡು ಬಂದಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಸವ ಕಳೆದ ದಿನಗಳಿಂದ ಹುಲ್ಲು ನೀರು ಸೇವಿಸದೆ ಮೃತಪಟ್ಟಿದೆ.
ಈ ಬಸವನ ಕುರಿತಂತೆ ಮಾತನಾಡಿರುವ ಪೂಜಾರಿ ಪ್ರತಾಪ್ ಅವರು,ನಾನು ರಸ್ತೆಯಲ್ಲಿ ಬಸವನನ್ನು ಹಿಡಿದುಕೊಂಡು ಹೋಗುತ್ತಿದ್ದ ಸಮಯದಲ್ಲಿ ನಮ್ಮ ಅಕ್ಕಪಕ್ಕದ ಜನರು ಬಸವನನ್ನು ಕೊಡುತ್ತೀರಾ ಎಂದು ಕೇಳುತ್ತಿದ್ದರು. ನಾನು ಯಾರಿಗೂ ಮಾರಾಟ ಮಾಡಲಿಲ್ಲ. ಪ್ರತಿ ಭಾನುವಾರ ಸ್ನಾನಮಾಡಿಸಿ ದೇವರಿಗೆ ಮತ್ತು ಬಸವನಿಗೆ ಪೂಜೆ ಮಾಡಿಕೊಂಡು ಬಂದಿದ್ದೆ. ಆದರೆ ಬಸವ ಮೃತಪಟ್ಟಿರುವುದು ಬೇಸರ ತಂದಿರುವುದಾಗಿ ಹೇಳಿದ್ದಾರೆ.