ಮಂಡ್ಯ : ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ನದಿಗೆ ಬಿದ್ದು ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣ ರೈಲು ನಿಲ್ದಾಣದ ಬಳಿಯ ಕಾವೇರಿ ನದಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪಾಂಡವಪುರ ಪಟ್ಟಣ ನಿವಾಸಿಯಾಗಿ, ಬೆಂಗಳೂರಿನ ಗಾಂಧಿನಗರದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (22) ಎಂಬಾತನೇ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಗೆ ಬಿದ್ದು ಮೃತಪಟ್ಟಿರುವ ಯುವಕ.
ಕಳೆದ ನ. 6ರಂದು ತನ್ನ ಸ್ನೇಹಿತರೊಂದಿಗೆ ತನ್ನೂರು ಪಾಂಡವಪುರಕ್ಕೆ ತೆರಳಿದ್ದ. ಮೈಸೂರಿಗೆ ಹೋಗಿ ವಾಪಸ್ಸು ಪಾಂಡವಪುರಕ್ಕೆ ರೈಲಿನಲ್ಲಿ ಎಲ್ಲರೂ ಹೊರಟಿದ್ದರು. ರೈಲಿನಲ್ಲಿ ಅಭಿಷೇಕ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ರೈಲು ಶ್ರೀರಂಗಪಟ್ಟಣ ಬಿಟ್ಟು ಪಾಂಡವಪುರದತ್ತ ಸಾಗಿತ್ತು. ಎಲ್ಲರೂ ಪಾಂಡವಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಆದರೆ ಅಭಿಷೇಕ್ ಮಾತ್ರ ಇಳಿಯಲಿಲ್ಲ. ರೈಲು ಹೊರಟುಹೋದ ನಂತರ ಸ್ನೇಹಿತರು ಅಭಿಷೇಕ್ಗಾಗಿ ಹುಡುಕಾಟ ನಡೆಸಿದರಾದರೂ, ಆತನ ಸುಳಿವು ಸಿಗಲಿಲ್ಲ.
ಎಲ್ಲೋ ಹೋಗಿರಬಹುದೆಂದು ತಿಳಿದ ಸ್ನೇಹಿತರು ವಾಪಸ್ಸು ತಮ್ಮ ಮನೆಗಳಿಗೆ ತೆರಳಿದ್ದರು. ಎರಡು ದಿನಗಳಾದರೂ ಅಭಿಷೇಕ್ ಬಾರದಿರುವುದನ್ನು ಕಂಡು ಆತನ ಪೋಷಕರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಶಿವಸ್ವಾಮಿ ಅವರು ರೈಲಿನಲ್ಲಿ ಸಂಚರಿಸಿದ್ದರ ಬಗ್ಗೆ ಆತನ ಸ್ನೇಹಿತರು, ಇತರರಿಂದ ಮಾಹಿತಿ ಪಡೆದರು. ಆತ ಕೊನೆಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದರ ಆಧಾರದ ಮೇರೆಗೆ ಶ್ರೀರಂಗಪಟ್ಟಣ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.
ಅಭಿಷೇಕ್ ನಾಪತ್ತೆಯಾಗಿ ನಾಲ್ಕು ದಿನ ಕಳೆದ ಮೇಲೆ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಶವ ತೆಲುತ್ತಿರುವುದು ಪತ್ತೆಯಾಗಿತ್ತು. ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ಸಹಾಯದಿಂದ ಶವವನ್ನು ನದಿಯಿಂದ ಹೊರತೆಗೆದು ನೋಡಲಾಗಿ ಅದು ಅಭಿಷೇಕ್ನದ್ದಾಗಿತ್ತು. ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಯಿತು. ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿ ಪಾಲಾಗಿದ್ದ ಅಭಿಷೇಕ್ನನ್ನು ನೆನದು ಸ್ನೇಹಿತರು ಕಣ್ಣೀರಿಟ್ಟರು.