ಮಂಡ್ಯ: ಇಂದಿನ ದಿನಗಳಲ್ಲಿ ಎಲ್ಲರನ್ನು ಅನುಮಾನದಿಂದ ನೋಡುವುದೇ ಒಂದು ಮೌಲ್ಯವಾಗಿದ್ದು,ಏನಾದರೂ ಕೆಲಸ ಮಾಡಿದರೆ ಏಕೆ ಮಾಡ್ತಾ ಇದಾನೆ ಎಂದು ಅನುಮಾನಿಸುತ್ತಾರೆ. ಇದರ ನಡುವೆಯೂ ನಾವೆಲ್ಲರೂ ಸಮಾಜ ಸೇವೆ ಮಾಡುವ ಅಗತ್ಯವಿದೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಜೆ.ಎನ್. ರಾಮಕೃಷ್ಣೇಗೌಡ ರವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಕಾಶಿ ಯವರೆಗೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ, ಅನ್ನದಾಸೋಹ, ಆರೋಗ್ಯ ಸೇವೆ ನೀಡುತ್ತಿರುವ ಆದಿಚುಂಚನಗಿರಿ ಮಠದ ಸೇವೆ ಅನನ್ಯವಾದುದು. ನಾನು ನಮ್ಮ ಊರು ನಾಗತಿಹಳ್ಳಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಹಲವಾರು ಟೀಕೆ ವಿಮರ್ಶೆಗಳನ್ನು ಕೇಳಬೇಕಾಯಿತು. ಒಂದು ಊರಿನಲ್ಲೇ ಹೀಗಾದರೆ ಮಠದಂತಹ ದೊಡ್ಡ ಸಂಸ್ಥೆಯನ್ನು ನಡೆಸುವುದು ಎಷ್ಟು ಕಷ್ಟದ ಕೆಲಸ ಎಂಬುದು ಅರಿವಾಯಿತು. ಹಿಂದೆ ಮಠದ ಕಾರ್ಯಗಳ ಬಗ್ಗೆ ಅಸಮಾಧಾನ ಹೊಂದಿದ್ದರೂ ಈಗ ಅದರ ಕಾರ್ಯದ ಮಹತ್ವದ ಅರಿ ವಾಗಿದೆ ಎಂದರು.
ನಲುವತ್ತು ವರ್ಷಗಳಿಂದ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನೆರಳಿನಲ್ಲಿ ಬೆಳೆದು ಬಂದ ರಾಮಕೃಷ್ಣೇಗೌಡರು ಮಠಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು. ವನಸಂವರ್ಧನೆ, ಗೋಶಾಲೆ, ಅಕ್ಷರ ದಾಸೋಹ ನೀಡುವಲ್ಲಿ ಇವರ ಪಾತ್ರ ಅಪಾರ. ರಾಜ್ಯೋತ್ಸವ ಪ್ರಶಸ್ತಿ ಎಂಬುದು ಶಿಕ್ಷಣ, ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ.ಸಮಾಜಮುಖಿಯಾಗಿ ಕೆಲಸ ಮಾಡುವ ಎಲ್ಲರಿಗೂ ಸಲ್ಲುವಂತಹದು. ರಾಮಕೃಷ್ಣೇಗೌಡರು ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದರೂ ಸಹ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಮಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ವಿ. ಗೋಪಾಲಗೌಡ, ಮೈಸೂರಿನ ಪ್ರಾದೇಶಿಕ ಆಯುಕ್ತರಾದ ಜಿ.ಸಿ. ಪ್ರಕಾಶ್,ಮಾಜಿ ಸಚಿವ ಎಂ.ಎಸ್ ಆತ್ಮಾನಂದ, ಚಲನಚಿತ್ರ ನಿರ್ದೇಶಕ ನರಸಿಂಹಯ್ಯ, ಸಮಾಜ ಸೇವಕ ಇಂಡುವಾಳು ಸಚ್ಚಿದಾನಂದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ, ಪಾಂಡವಪುರ ತಾಲೂಕ ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ, ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ಮಂಜು ಮುತ್ತೆ ಗೆರೆ, ಎಂ.ಬಿ. ರಮೇಶ್, ಹುಸ್ಕೂರು ಕೃಷ್ಣೇಗೌಡ, ಧನಂಜಯ ದರಸಗುಪ್ಪೆ ಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.