ಹಾಸನ: ವಸತಿ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆ ಕಟ್ಟಡ ಮಾಡದಂತೆ ಸಂಬಂಧಪಟ್ಟವರು ಕೂಡಲೇ ತಡೆಹಿಡಿಯಬೇಕೆಂದು ನಗರದ ಕೆ.ಆರ್.ಪುರಂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಆರ್. ಪುರಂ ಬಡಾವಣೆಯಲ್ಲಿರುವ 5-6-7ನೇ ಅಡ್ಡರಸ್ತೆ ಹಾಸನಕ್ಕೆ ಹೃದಯಭಾಗವಾಗಿದ್ದು, ವಾರ್ಡ್. ಸಂಖ್ಯೆ 6ರಲ್ಲಿರುವ ಈ ಭಾಗದಲ್ಲಿ ಈಗಾಗಲೇ ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ನಮ್ಮ ಈ ಬಡಾವಣೆಯ ರಸ್ತೆಯು ಕೇವಲ 30 ಅಡಿ ವಿಸ್ತೀರ್ಣವಾಗಿದ್ದು, ಇದು ಏಕಮುಖ ಸಂಚಾರವು ಕೂಡ ಆಗಿದೆ. ಈಗಾಗಲೇ ಇಲ್ಲಿರುವ ಖಾಸಗಿ ಆಸ್ಪತ್ರೆಗಳಿಂದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಹಾಗೂ ಅದರಲ್ಲೂ ಆಸ್ಪತ್ರೆಯ ಅಂಬುಲೈನ್ಸ್ಗಳ ಶಬ್ದಮಾಲಿನ್ಯ ಕೂಡ ಎಲ್ಲಾ ಸಮಯದಲ್ಲೂ ಓಡಾಡುವ ಕಾರಣ ಇಲ್ಲಿನ ನಾಗರಿಕರಿಗೆ ಬಹಳ ತೊಂದರೆಯಾಗುತ್ತಿರುತ್ತದೆ. ಈಗಿರುವ ಖಾಸಗಿ ಆಸ್ಪತ್ರೆಗಳು ತಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಸರ್ಜನೆ ಮಾಡದೆ ನಮಗೆ ಸುತ್ತಮುತ್ತಲು ವಾಸಿಸುತ್ತಿರುವ ನಾಗರಿಕರಿಗೆ ತ್ಯಾಜ್ಯ ವಸ್ತುಗಳಿಂದ ಬಹಳ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೋಗಗಳು ಬಹಳ ವೇಗವಾಗಿ ಮಕ್ಕಳು, ವಯಸ್ಕರು, ವಯೋವೃದ್ದರು ಎನ್ನದೆ ತೀವ್ರವಾಗಿ ಹರಡುತ್ತಿದೆ. ಅದೂ ಅಲ್ಲದೆ ಬೆಳಗಿನ ಸಮಯದಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಶಾಲಾ – ಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಈ ವಾಹನಗಳ ಓಡಾಟ ಅಧಿಕವಾಗಿರುವುದರಿಂದ ಯಾವ ಸಮಯದಲ್ಲಿ ಯಾವುದೇ ತರಹವಾದ ಅವಘಡಗಳು ಸಂಭವಿಸಬಹುದು. ಈಗಾಗಲೇ ಇದಕ್ಕೆ ಸಾಕ್ಷಿಯಾಗಿ ಕೆ.ಆರ್.ಪುರಂ ಮುಖ್ಯರಸ್ತೆಗಳಲ್ಲಿ ಅಪಘಾತವಾಗಿ ಅನೇಕರು ಮೃತಪಟ್ಟಿರುತ್ತಾರೆ. ಇದಕ್ಕೆಲ್ಲ ಕಾರಣಕರ್ತರಾರು? ಆದರೂ ಕೂಡ ಈಗ ಅಡ್ಡರಸ್ತೆಗಳಲ್ಲಿ ವಸತಿ ಉದ್ದೇಶದ ಪ್ರದೇಶಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ವ್ಯಾಪಾರ ವ್ಯವಹಾರಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದು, ಮತ್ತೆ ಈ ವಸತಿ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಮಾಣವಾಗುತ್ತಿದೆ. ನಾವು ನಗರಸಭೆಗೆ ಮತ್ತು ಜಿಲ್ಲಾಧಿಕಾರಿ ಕಛೇರಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ.
ದೂರು ಕೊಟ್ಟಿರುವುದನ್ನು ಗಮನಿಸಿ ಖಾಸಗಿ ಆಸ್ಪತ್ರೆ ನಿರ್ಮಿಸಲು ಹೊರಟಿರುವವರು ನಿವಾಸಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಓಡಾಡುವ ಜಾಗದಲ್ಲಿ ಶೆಡ್ ಹಾಕಿಕೊಂಡಿದ್ದು, ಇದರಿಂದ ಈ ಭಾಗದಲ್ಲಿ ಯಾರು ವಾಹನ ಸಂಚಾರ ಮತ್ತು ಓಡಾಡುವುದಕ್ಕೆ ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಆತಂಕವ್ಯಕ್ತಪಡಿಸಿದ ಅವರು, ತಿರುಗಾಡುವ ರಸ್ತೆ ಮೇಲೆ ನಿರ್ಮಿಸಲಾಗಿರುವ ಶೆಡ್ಡನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ವಸತಿ ಪ್ರದೇಶದಲ್ಲಿ ಉದ್ದೇಶಿತವಾಗಿ ಖಾಸಗಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಹೊರಟಿರುವ ಖಾಸಗಿ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡದಂತೆ ಕೂಡಲೇ ನಿರ್ಬಂಧಿಸಬೇಕೆಂದು ಬಡಾವಣೆಯ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.